ಮಂಗಳೂರು: ‘ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ’ ಯೋಜನೆ ಅಡಿಯಲ್ಲಿ ಕೋವಿಡ್ –19 ಮೊದಲ ಹಾಗೂ ಎರಡನೇ ಅಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 5,564 ಮಂದಿಗೆ ಕೋವಿಡ್ ಉಚಿತ ಚಿಕಿತ್ಸೆ ಲಾಭ ಸಿಕ್ಕಿದೆ. ಈ ಯೋಜನೆ ಫಲಾನುಭವಿಗಳ ಚಿಕಿತ್ಸೆಗೆ ಸರ್ಕಾರವು ಜಿಲ್ಲೆಗೆ ₹ 32 ಕೋಟಿ ಬಿಡುಗಡೆ ಮಾಡಿದ್ದು, ಈ ಯೋಜನೆ ಬಡವರ ಪಾಲಿನ ಸಂಜೀವಿನಿ ಆಗಿದೆ.
ಜಿಲ್ಲೆಯ 80 ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ ಯೋಜನೆ ಜಾರಿಯಲ್ಲಿದ್ದು, ಕೋವಿಡ್ –19 ಸೋಂಕಿನಿಂದ ಬಳಲು ವವರು ಉಚಿತ ಚಿಕಿತ್ಸೆ ಪಡೆಯ ಬಹುದು. ಈ ಆಸ್ಪತ್ರೆಗಳ ಜತೆಗೆ ಸರ್ಕಾ ರವು ಒಪ್ಪಂದ ಮಾಡಿಕೊಂಡಿದ್ದು, ವೆಂಟಿಲೇಟರ್ ಹಾಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವ ಫಲಾನುಭವಿಗಳಿಗೆ ಸೌಲಭ್ಯ ಲಭ್ಯವಿದೆ.
ತುರ್ತು ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಐಸಿಯು ಮತ್ತು ವೆಂಟಿಲೇಟರ್ಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆಯಿಂದ ಯಾವುದೇ ಶಿಫಾರಸು ಪತ್ರದ ಅಗತ್ಯವಿಲ್ಲ. ರೋಗಿ ಚಿಕಿತ್ಸೆ ಪಡೆಯುವ ಆಸ್ಪತ್ರೆಗೆ ಹೋಗಿ ರೆಫರಲ್ ಪತ್ರವನ್ನು ನೀಡಲಾಗುತ್ತದೆ. ಇನ್ನು ಕೆಲ ರೋಗಿಗಳು ಜಿಲ್ಲಾ ಆಸ್ಪತ್ರೆಗೆ ಬಂದು, ಹಾಸಿಗೆ ಅಥವಾ ವೆಂಟಿಲೇಟರ್ ಲಭ್ಯವಿಲ್ಲದೇ ಇದ್ದರೆ, ಅಂತಹ ಸಂದರ್ಭದಲ್ಲಿ ಶಿಫಾರಸು ಪತ್ರ ಬೇಕಾಗುತ್ತದೆ.
ಸ್ಪೆಷಲ್ ವಾರ್ಡ್/ ಸೆಮಿ ಪ್ರೈವೇಟ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆದುಕೊಳ್ಳುವವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಸಾಮಾನ್ಯ ವಾರ್ಡ್ ನಲ್ಲಿ ಕೋವಿಡ್ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ಈ ಸೌಲಭ್ಯ ನೀಡಲಾಗು ತ್ತದೆ. ಕೋವಿಡ್ ಚಿಕಿತ್ಸೆಗೆ ಬಿಪಿಎಲ್, ಎಪಿಎಲ್ ಮಾನದಂಡ ಅನ್ವಯ ಆಗಲ್ಲ. ಬದಲಾಗಿ ಆಧಾರ್ ನೋಂದಣಿ ಸಂಖ್ಯೆ ನೀಡಿದರೆ ಸಾಕು.
‘ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಐಸಿಯು ಹಾಗೂ ವೆಂಟಿಲೇಟರ್ ಉಚಿತ ಚಿಕಿತ್ಸೆ ಪಡೆಯುವ ಕೋವಿಡ್ ಸೋಂಕಿತರಿಗೆ ರೆಮ್ಡಿಸಿವಿರ್ ನೀಡಲಾಗುತ್ತದೆ. ಐಸಿಯುನಿಂದ ವಾರ್ಡ್ಗೆ ಬಂದ ನಂತರವು ಅವರಿಗೆ ನೀಡಬೇಕಾದ ರೆಮ್ಡಿಸಿವಿರ್ ನೀಡಲಾ ಗುತ್ತದೆ. ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆ ಆಗುವವರಿಗೆ ಎಲ್ಲ ಸೌಲಭ್ಯಗಳು ಈ ಯೋಜನೆ ಅಡಿಯಲ್ಲಿ ಸಿಗುತ್ತವೆ’ ಎಂದು ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಕಾರ್ಯ ಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಡಾ.ರತ್ನಾಕರ್ ತಿಳಿಸಿದರು.
‘ಕೋವಿಡ್ ಸೋಂಕಿತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ 37 ಮಂದಿ ಆರೋಗ್ಯ ಮಿತ್ರ ಸಿಬ್ಬಂದಿ ಇದ್ದಾರೆ. ಅವರು ಕೂಡ ಸರಿಯಾಗಿ ಸ್ಪಂದನೆ ಮಾಡದೇ ಇದ್ದಲ್ಲಿ ಜಿಲ್ಲಾ ನೋಡಲ್ ಅಧಿಕಾರಿ ಅವರನ್ನು ಸಂಪರ್ಕ ಮಾಡಬಹುದು’ ಎಂದರು.
‘ಖಾಸಗಿ ಆಸ್ಪತ್ರೆ; ಚಿಕಿತ್ಸೆಗೆ ದರ ನಿಗದಿ’
‘ಆಯುಷ್ಮಾನ್ ಭಾರತ್ ಯೋಜನೆ ಹೊರತುಪಡಿಸಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕೋವಿಡ್ ಸೋಂಕಿತರಿಗೆ ದಿನಕ್ಕೆ ₹ 25 ಸಾವಿರ ದರ ನಿಗದಿಪಡಿಸಲಾಗಿದೆ. ಇದಕ್ಕಾಗಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕುಂದುಕೊರತೆ ನಿವಾರಣಾ ಸಮಿತಿ ಇದೆ’ ಎಂದು ಡಾ.ರತ್ನಾಕರ ತಿಳಿಸಿದರು.
ಈ ಯೋಜನೆ ಅಡಿಯಲ್ಲಿ ಕೋವಿಡ್ ಹೊರತುಪಡಿಸಿದ 1,650 ಕಾಯಿಲೆಗೆ ಜಿಲ್ಲೆಯ 20 ಆಸ್ಪತ್ರೆಗಳಲ್ಲಿ ₹ 5 ಲಕ್ಷದ ವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಸಿಗಲಿದೆ. ಜಿಲ್ಲಾಸ್ಪತ್ರೆಯಲ್ಲಿ ಈ ಸೌಲಭ್ಯ ಇಲ್ಲದೇ ಇದ್ದಾಗ ಫಲಾನುಭವಿ ಶಿಫಾರಸು ಪತ್ರ ಹಾಗೂ ಬಿಪಿಎಲ್ ಕಾರ್ಡ್ ಹೊಂದಿರಬೇಕು. ಈ ಯೋಜನೆ ಅಡಿಯಲ್ಲಿ ₹ 23 ಕೋಟಿ ಹಣ ಆಸ್ಪತ್ರೆಗಳಿಗೆ ಬಿಡುಗಡೆ ಮಾಡಲಾಗಿದೆ’ ಎಂದು ಹೇಳಿದರು.
ಕೋವಿಡ್ ಹೊರತು ಪಡಿಸಿದ ಕಾಯಿಲೆ ಚಿಕಿತ್ಸೆಗೆ ಜಿಲ್ಲಾಸ್ಪತ್ರೆ ಶಿಫಾರಸು ಅಗತ್ಯ. ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಪೂರಕ ಸಹಕಾರ ಸಿಗುತ್ತಿದೆ. ಜಿಲ್ಲಾ ಸಂಯೋಜಕಿ ಡಾ.ಯಶಸ್ವಿನಿ
ಜಿಲ್ಲಾ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಯಕ್ರಮ
ನೋಡಲ್ ಅಧಿಕಾರಿ ಡಾ. ರತ್ನಾಕರ್ (9480157604)
ಜಿಲ್ಲಾ ಸಂಯೋಜಕಿ ಡಾ.ಯಶಸ್ವಿನಿ (72590 03406) ಸಂಪರ್ಕಿಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.