ಮಂಗಳೂರು: ಬಹುದಿನಗಳಿಂದ ಚರ್ಚಿಸಲಾಗುತ್ತಿದ್ದ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆಯಿತು. ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಸುದರ್ಶನ ಮೂಡುಬಿದಿರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ ಚುನಾವಣಾ ಉಸ್ತುವಾರಿ ನಿರ್ಮಲ್ಕುಮಾರ್ ಸುರಾನಾ ಮತ್ತು ಜಿಲ್ಲಾ ಚುನಾವಣಾಧಿಕಾರಿ ಕೆ.ಉದಯ ಕುಮಾರ್ ಶೆಟ್ಟಿ ಚುನಾವಣೆ ನಡೆಸಿಕೊಟ್ಟರು.
ಈವರೆಗೆ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಶಾಸಕ ಸಂಜೀವ ಮಠಂದೂರು, ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಚುನಾವಣಾ ವೀಕ್ಷಕರು, ಪಕ್ಷದ ಎಂಟು ಮಂಡಲಗಳ ಅಧ್ಯಕ್ಷರು, ಶಾಸಕರಾದ ಭರತ್ ಶೆಟ್ಟಿ, ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಭಾಗಿಯಾಗಿದ್ದರು.
ಹಾಲಿ ಅಧ್ಯಕ್ಷ ಸಂಜೀವ ಮಠಂದೂರು ಅವರ ಅವಧಿ ಸೆಪ್ಟೆಂಬರ್ಗೆ ಅಂತ್ಯಗೊಂಡಿದ್ದು, ವಿವಿಧ ಕಾರಣಗಳಿಂದ ನೂತನ ಅಧ್ಯಕ್ಷರ ಆಯ್ಕೆ ನನೆಗುದಿಗೆ ಬಿದ್ದಿತ್ತು. ಮಠಂದೂರು ಅಧ್ಯಕ್ಷತೆಯಲ್ಲಿ ವಿಧಾನಸಭೆ, ಲೋಕಸಭೆ ಹಾಗೂ ಮಹಾನಗರ ಪಾಲಿಕೆ ಚುನಾವಣೆ ಎದುರಿಸಿದ್ದ ಬಿಜೆಪಿ, ಭರ್ಜರಿ ಜಯಗಳಿಸಿತ್ತು.
ನೂತನ ಅಧ್ಯಕ್ಷ ಸುದರ್ಶನ್ ಅವರನ್ನು ಅಭಿನಂದಿಸಿರುವ ಶಾಸಕ ವೇದವ್ಯಾಸ ಕಾಮತ್, ‘ನಿಮ್ಮ ಅವಧಿಯಲ್ಲಿ ಪಕ್ಷವು ಇನ್ನಷ್ಟು ಶಕ್ತಿಯುತವಾಗಿ ಹೊರಹೊಮ್ಮಲಿ’ ಎಂದು ಹಾರೈಸಿದ್ದಾರೆ.