ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಇಪಿ ರದ್ದತಿಯಿಂದ ಉನ್ನತ ಶಿಕ್ಷಣಕ್ಕೆ ಆಪತ್ತು: ಅರುಣ ಶಹಾಪುರ

Published 10 ಮೇ 2024, 12:28 IST
Last Updated 10 ಮೇ 2024, 12:28 IST
ಅಕ್ಷರ ಗಾತ್ರ

ಮಂಗಳೂರು: ‘ರಾಷ್ಟ್ರೀಯ ಶಿಕ್ಷಣ ನೀತಿ–2020 (ಎನ್‌ಇಪಿ) ಭಾಗವಾಗಿದ್ದ ನಾಲ್ಕು ವರ್ಷಗಳ ಪದವಿ ಸ್ಥಗಿತಗೊಳಿಸಿ, 3 ವರ್ಷಗಳ ಪದವಿ ಕೋರ್ಸ್‌ಗೆ ಸುತ್ತೋಲೆ ಹೊರಡಿಸಿರುವ ರಾಜ್ಯ ಸರ್ಕಾರದ ಕ್ರಮ ವಿದ್ಯಾರ್ಥಿಗಳಿಗೆ ಅಷ್ಟೇ ಅಲ್ಲ, ವಿಶ್ವವಿದ್ಯಾಲಯಗಳಿಗೂ ಆಪತ್ತು ತರಲಿದೆ’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪುರ ಎಚ್ಚರಿಸಿದರು.

ಪೀಪಲ್ಸ್‌ ಫೋರಂ ಫಾರ್‌ ಕರ್ನಾಟಕ ಎಜ್ಯುಕೇಶನ್‌ ವತಿಯಿಂದ ಶುಕ್ರವಾರ ಇಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ–2020 ಜಾರಿಗೊಳಿಸದಿದ್ದರೆ ಸಂಶೋಧನೆಗಾಗಿ ಕೇಂದ್ರದಿಂದ ಬರುವ ಅನುದಾನ ವಿಶ್ವವಿದ್ಯಾಲಯಗಳಿಗೆ ಕೈತಪ್ಪುವ ಸಾಧ್ಯತೆ ಇದೆ ಎಂದೂ ಅವರು ಎಚ್ಚರಿಸಿದರು.

‘ನಾಲ್ಕು ವರ್ಷಗಳ ಪದವಿ ಪೂರೈಸಿದವರು ನೇರವಾಗಿ ಪಿಎಚ್‌.ಡಿಗೆ ಪ್ರವೇಶ ಪಡೆಯಬಹುದು ಎಂದು ಯುಜಿಸಿ ಸುತ್ತೋಲೆ ಹೊರಡಿಸಿದೆ. ಈ ಹೊತ್ತಿನಲ್ಲಿ ರಾಜ್ಯ ಸರ್ಕಾರದ ಈ ನಿರ್ಧಾರ ಸರಿಯಲ್ಲ. ಇದು ವಿದ್ಯಾರ್ಥಿಗಳನ್ನು ಅವಕಾಶದಿಂದ ವಂಚಿತರನ್ನಾಗಿ ಮಾಡಿದಂತಾಗುತ್ತದೆ‘ ಎಂದರು.

ಎನ್‌ಇಪಿ ಜಾರಿಗೂ ಮೊದಲು ಪ್ರವೇಶ ಪಡೆದವರು, ಎನ್‌ಇಪಿ ಅಡಿ ಪ್ರವೇಶ ಪಡೆದವರು ಹಾಗೂ ಈಗ ಎಸ್‌ಇಪಿ ಅಡಿ ಪ್ರವೇಶ ಪಡೆಯುವವರಿಗೆ ಹೀಗೆ ಮೂರು ರೀತಿಯ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಅದಕ್ಕೆ ನಮ್ಮ ವಿಶ್ವವಿದ್ಯಾಲಯಗಳು ಆರ್ಥಿಕವಾಗಿ ಸಮರ್ಥವಾಗಿವೆಯೇ ಎಂದು ಅವರು ಪ್ರಶ್ನಿಸಿದರು.

ವಿಶ್ವವಿದ್ಯಾಲಯ ಅನುದಾನ ಆಯೋಗದ ಮಾಜಿ ಅಧ್ಯಕ್ಷ ಸುಖದೇವ್‌ ಥೋರಟ್‌ ನೇತೃತ್ವದ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಆಯೋಗವು ಸಲ್ಲಿಸಿದ ಮಧ್ಯಂತರ ವರದಿಯನ್ನು ಆಧರಿಸಿ ಉನ್ನತ ಶಿಕ್ಷಣ ಇಲಾಖೆ ನಾಲ್ಕು ವರ್ಷಗಳ ಪದವಿ ಕೈಬಿಡುವ ನಿರ್ಧಾರ ತೆಗೆದುಕೊಂಡಿದೆ. ಈ ಮಧ್ಯಂತರ ವರದಿಯಲ್ಲಿ ಏನಿದೆ ಎಂಬುದನ್ನು ಸರ್ಕಾರ ಬಹಿರಂಗ ಪಡಿಸಿಲ್ಲ. ಶಿಕ್ಷಣ ತಜ್ಞರ ಜೊತೆ ಸಮಾಲೋಚನೆ ನಡೆಸಿಲ್ಲ. ಕರ್ನಾಟಕ ಉನ್ನತ ಶಿಕ್ಷಣ ಪರಿಷತ್‌ನಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿದ್ದು ಬಹಿರಂಗವಾಗಿಲ್ಲ ಎಂದು ಅವರು ದೂರಿದರು.

ಗೊಂದಲ: ಪಿಯುಸಿ ಪ್ರಥಮ ವರ್ಷದ ಪ್ರವೇಶ ಪ್ರಕ್ರಿಯೆಯಲ್ಲಿಯೂ ರಾಜ್ಯ ಸರ್ಕಾರ ದೊಡ್ಡ ಗೊಂದಲ ಸೃಷ್ಟಿಸಿದೆ. ವಿದ್ಯಾರ್ಥಿಗಳ ಮಾಹಿತಿಯನ್ನು ಪಿಯು ಪೋರ್ಟಲ್‌ನಲ್ಲಿ ದಾಖಲಿಸಬೇಕು ಎಂಬ ಸೂಚನೆ ಈ ಹಂತದಲ್ಲಿ ಪಾಲನೆ ಕಷ್ಟ. ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಶಿಕ್ಷಕೇತರ ಸಿಬ್ಬಂದಿಯೇ ಇಲ್ಲ. ಮೇಲಾಗಿ ಈ ಮಾರ್ಗಸೂಚಿ ಅನುದಾನ ರಹಿತ ಕಾಲೇಜುಗಳ ಮೇಲೆ ಗದಾಪ್ರಹಾರ ನಡೆಸಿದಂತಿದೆ. ಈ ಪದ್ಧತಿ ಜಾರಿಗೂ ಮುನ್ನ ಸಾಕಷ್ಟು ಅವಕಾಶ ನೀಡಬೇಕಾಗಿತ್ತು. ಈಗ ಪ್ರವೇಶ ಆರಂಭವಾಗಿರುವ ಸಂದರ್ಭದಲ್ಲಿ ಇದನ್ನು ಜಾರಿ ಮಾಡಿರುವುದು ಸರಿಯಾದ ಕ್ರಮವಲ್ಲ. ಈ ನೀತಿ ವಾಪಸ್‌ ಪಡೆಯದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಅವರು ಹೇಳಿದರು.

ಪಠ್ಯಕ್ರಮ: ದೇಶದಲ್ಲಿ 2023ರ ಪಠ್ಯಕ್ರಮ ಚೌಕಟ್ಟಿನ ಆಧಾರದ ಮೇಲೆ ಪಠ್ಯಕ್ರಮವನ್ನು ಪರಿಷ್ಕರಿಸಲಾಗುತ್ತಿದೆ. ಆದರೆ, ರಾಜಕೀಯ ಕಾರಣಗಳಿಗಾಗಿ ರಾಜ್ಯ ಸರ್ಕಾರ ಶಾಲಾ ಪಠ್ಯಕ್ರವನ್ನು 2007ರ ಪಠ್ಯಕ್ರಮದ ಚೌಕಟ್ಟಿನ ಆಧಾರದ ಮೇಲೆ ಪರಿಷ್ಕರಿಸುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದರು.

ಪೀಪಲ್ಸ್‌ ಫೋರಂ ಫಾರ್‌ ಕರ್ನಾಟಕ ಎಜ್ಯುಕೇಶನ್‌ನ ಪದಾಧಿಕಾರಿಗಳಾದ ಪ್ರೊ. ರಾಜಶೇಖರ ಹೆಬ್ಬಾರ, ರಮೇಶ ಕೆ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT