‘ಎರಡರಷ್ಟು ಸಮಾಜಕ್ಕೆ ಹಿಂದಿರುಗಿಸಿ’: ಕಥೊಲಿಕ್ ಸೊಸೈಟಿ ಅಮೃತ ಮಹೋತ್ಸವ

ಮಂಗಳೂರು: ಕೆನರಾ ಕಥೊಲಿಕ್ ಎಜುಕೇಷನಲ್ ಸೊಸೈಟಿಯ 75 ನೇ ವಾರ್ಷಿಕೋತ್ಸವವನ್ನು ನಗರದ ಸೇಂಟ್ ಅಲೋಶಿಯಸ್ ಹೈಸ್ಕೂಲ್ನ ಸಭಾಂಗಣದಲ್ಲಿ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಬಿಷಪ್ ರೆ.ಅಲೋಶಿಯಸ್ ಪಾವ್ಲ್ ಡಿಸೋಜ ಮಾತನಾಡಿ, ಇಂದು ಹಲವು ಸಂಘ–ಸಂಸ್ಥೆಗಳು, ಉದಾರ ದಾನಿಗಳು ಶ್ರಮಪಟ್ಟು ವಿದ್ಯಾರ್ಥಿಗಳಿಗೆ ವಿಶೇಷ ಸಹಾಯಹಸ್ತ ನೀಡುತ್ತ ಬಂದಿದ್ದಾರೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದ ಕೆಲಸಕ್ಕೆ ಸೇರಿದ ನಂತರ ಎಲ್ಲವನ್ನೂ ಮರೆತುಬಿಡುವುದು ಆಘಾತಕಾರಿ ಬೆಳವಣಿಗೆ. ವಿದ್ಯಾರ್ಥಿಗಳು ಸಮಾಜದಿಂದ ಪಡೆದಿದ್ದರ ಎರಡರಷ್ಟು ಸಮಾಜಕ್ಕೆ ಹಿಂದಿರುಗಿಸಬೇಕು ಎಂದು ಹೇಳಿದರು.
ಸೇಂಟ್ ಅಲೋಶಿಯಸ್ ಕಾಲೇಜಿನ ರೆಕ್ಟರ್ ರೆ. ಮೆಲ್ವಿನ್ ಜೆ. ಪಿಂಟೋ ಮಾತನಾಡಿ, ಯಾವುದೇ ವಿದ್ಯಾರ್ಥಿಗಳು ಹಣದ ಕೊರತೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು. ಈ ದೃಷ್ಟಿಯಿಂದ ಸೇಂಟ್ ಅಲೋಶಿಯಸ್ ಶಿಕ್ಷಣ ಸಮೂಹ ಸಂಸ್ಥೆ ಮುತುವರ್ಜಿ ವಹಿಸಿದೆ. ಈ ಸೊಸೈಟಿ ಕೂಡ 75 ವರ್ಷಗಲಿಂದ ಶಿಕ್ಷಣಕ್ಕೆ ನೀಡಿದ ಕೊಡುಗೆ ಸ್ಮರಣೀಯ ಎಂದರು.
ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ಟಲಿನೋ ಮಾತನಾಡಿ, ಸೊಸೈಟಿಯು ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ತಮ್ಮದೇ ಆದ ವಿಶೇಷ ಕೊಡುಗೆ ನೀಡುತ್ತಿದೆ. ಹಳೆಯ ಸೊಸೈಟಿಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರ ನೀಡಿ, ಅವರು ಉನ್ನತ ಹುದ್ದೆಗಳಲ್ಲಿ ಅಲಂಕರಿಸುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದಂತಾಗಿದೆ ಎಂದು ಹೇಳಿದರು.
ಸೊಸೈಟಿ ಸದಸ್ಯ, ವಕೀಲ ಎಂ.ಪಿ. ನೊರೊನ್ಹ ಮಾತನಾಡಿದರು. ಸಂಸ್ಥೆಯಲ್ಲಿ 75 ವರ್ಷಗಳಲ್ಲಿ ಸೇವೆ ಸಲ್ಲಿಸಿದ ಪದಾಧಿಕಾರಿಗಳು, ನಿರ್ದೇಶಕರು, ಸಹಕಾರ ನೀಡಿದವರನ್ನು ಸನ್ಮಾನಿಸಲಾಯಿತು. ಸೊಸೈಟಿ ಅಧ್ಯಕ್ಷ ರುಡಾಲ್ಫ್ ಡಿಸಿಲ್ವ ಸ್ವಾಗತಿಸಿದರು. ಉಪಾಧ್ಯಕ್ಷ ಸುಶೀಲ್ ನೊರೊನ್ಹ ವಂದಿಸಿದರು. ಗೌರವ ಕಾರ್ಯದರ್ಶಿ ಒಸ್ವಾಲ್ಡ್ ಡಿಕುನ್ಹ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಐವನ್ ಪಿಂಟೋ ಕಾರ್ಯಕ್ರಮ ನಡೆಸಿಕೊಟ್ಟರು. ಶಿಕ್ಷಕಿ ಐರಿನ್ ಫರ್ನಾಂಡಿಸ್ ನಿರೂಪಿಸಿದರು. ನಿರ್ದೇಶಕರಾದ ಸಿಂತಿಯಾ ಫರಾಯಸ್, ಶಾಂತಿ ರಸ್ಕಿನ್ಹಾ, ಜೋಸೆಫ್ ರೇಗೊ, ಲಾರೆನ್ಸ್ ಪಿಂಟೋ, ನೋವೆಲ್ ಲೋಬೊ, ಸುನಿಲ್ ವಾಸ್, ಜೇಮ್ಸ್ ಮಾಡ್ತ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.