ಮಂಗಳೂರು: ಜಿಲ್ಲೆಯಲ್ಲಿ ಸೋಮವಾರದಿಂದ ಕಠಿಣ ನಿಯಮ ಜಾರಿಗೊಳಿಸಿದ್ದು, ಬೆಳಿಗ್ಗೆ 6 ರಿಂದ 9 ಗಂಟೆಯ ವರೆಗೆದಿನಸಿ ಹಾಗೂ ತರಕಾರಿಯನ್ನು ಖರೀದಿಸಲು ಅವಕಾಶ ನೀಡಲಾಗಿತ್ತು.
ನಗರದ ಕ್ಲಾಕ್ ಟವರ್ ಎದುರಿನಿಂದ ಕೇಂದ್ರ ಮಾರುಕಟ್ಟೆಗೆ ಸಾಗುವ ರಸ್ತೆಯಲ್ಲಿ ದಿನಸಿ ಹಾಗೂ ತರಕಾರಿಯನ್ನು ಖರೀದಿಸಲು ಜನರುಮುಗಿಬಿದ್ದಿದ್ದರು. ಸುರಕ್ಷಿತ ಅಂತರವನ್ನು ಕಾಪಾಡಲು ಪೊಲೀಸರು ಮನವಿ ಮಾಡುತ್ತಿರುವ ದೃಶ್ಯಗಳು ಕಂಡು ಬಂದವು.
ಕಟ್ಟು ನಿಟ್ಟಿನ ಕ್ರಮಕ್ಕೆ ಸರ್ಕಾರ ಆದೇಶಿಸಿದ್ದು, ಪೊಲೀಸರು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದಾರೆ ನಗರದಲ್ಲಿ ಸಾರ್ವಜನಿಕರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಇನ್ನು ನಗರದಾದ್ಯಂತ ಅನೇಕ ವಾಹನಗಳು ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದು, ವಾಹನ ಚಾಲನೆಯನ್ನು ನಿಯಂತ್ರಿಸಲು ಪೋಲಿಸರು ಹರ ಸಾಹಸ ಮಾಡುವಂತಾಯಿತು.
ಸೋಮವಾರ ಬೆಳಿಗ್ಗೆಯಿಂದ ಈವರೆಗೆ ಒಟ್ಟು 140 ಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವಾಹನಗಳನ್ನು ಕೋರ್ಟ್ ನಿಂದ ಬಿಡುಗಡೆ ಮಾಡಿಸಿಕೊಳ್ಳಲು ವಿಳಂಬ ಆಗಲಿದೆ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.