ಪುತ್ತೂರು: ಚೊಚ್ಚಲ ಹೆರಿಗೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿ, ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ತಾಯಿಯೊಬ್ಬರು ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಮುಂಡ್ಯ ಕೆಮ್ಮತ್ತಡ್ಕ ಮನೋಜ್ ಅವರ ಪತ್ನಿ, ಸುಳ್ಯ ತಾಲ್ಲೂ ಕಿನ ಪಂಬೆತ್ತಾಡಿ ಗ್ರಾಮದ ಮೂಲೆಮನೆ ವಿಶ್ವನಾಥ ಗೌಡ ಅವರ ಪುತ್ರಿ ಪೂಜಿತಾ (27) ಮೃತಪಟ್ಟ ಮಹಿಳೆ.
ಪುತ್ತೂರಿನ ಸಿಟಿ ಆಸ್ಪತ್ರೆಗೆ ದಾಖಲಾಗಿದ್ದ ಪೂಜಿತಾ ಅವರು ಭಾನುವಾರ ಬೆಳಿಗ್ಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಹೆರಿಗೆಯ ವೇಳೆ ಆರೋಗ್ಯವಾಗಿದ್ದ ಅವರಿಗೆ ಮಧ್ಯಾಹ್ನ ವೇಳೆಗೆ ತೀವ್ರ ರಕ್ತಸ್ರಾವ ಉಂಟಾಗಿದ್ದ ಕಾರಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕೊಂಡೊಯ್ಯ ಲಾಗಿತ್ತು. ಚಿಕಿತ್ಸೆಯ ಬಳಿಕ ಸಂಜೆಯ ವೇಳೆಗೆ ಸ್ವಲ್ಪ ಚೇತರಿಸಿಕೊಂಡಿದ್ದ ಅವರು ತಡರಾತ್ರಿಯ ವೇಳೆ ಮತ್ತೆ ರಕ್ತಸ್ರಾವ ಉಂಟಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಪೂಜಿತಾ ಅವರು ಜನ್ಮ ನೀಡಿದ್ದ ಗಂಡು ಮತ್ತು ಹೆಣ್ಣು ಅವಳಿ ಶಿಶುಗಳು ಆರೋಗ್ಯವಾಗಿದ್ದು, ಪುತ್ತೂರು ಆಸ್ಪತ್ರೆಯಲ್ಲಿದ್ದಾರೆ.
ಬಿ.ಇಡಿ ಅಧ್ಯಯನ ನಡೆಸುತ್ತಿದ್ದ ಪೂಜಿತಾ ಅವರು ಇತ್ತೀಚೆಗಷ್ಟೇ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು. ಮೃತರಿಗೆ ಪತಿ, ತಂದೆ, ತಾಯಿ, ಸಹೋದರ ಇದ್ದಾರೆ.