ಸುಬ್ರಹ್ಮಣ್ಯ: ಕೋವಿಡ್ ನಿರ್ಮೂಲನೆಗಾಗಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬುಧವಾರ ಧನ್ವಂತರಿ ಹೋಮ ನಡೆಯಿತು.
ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ ಅವರು ಹೋಮದ ವೈದಿಕ ವಿಧಿ ನೆರವೇರಿಸಿದರು. ಮೇ 5ರಿಂದ ದೇವಳದ 10 ಜನ ಪುರೋಹಿತರು ತುಪ್ಪದೊಂದಿಗೆ ಒಂದು ಲಕ್ಷ ಧನ್ವಂತರಿ ಜಪ ನೆರವೇರಿಸಿದರು. ಈ ತುಪ್ಪವನ್ನು ಧನ್ವಂತರಿ ಹೋಮಕ್ಕೆ ಅರ್ಪಿಸಲಾಯಿತು.
ದೇವರಲ್ಲಿ ಪ್ರಾರ್ಥನೆ: ಹೋಮದ ಬಳಿಕ ದೇಶ ಹಾಗೂ ರಾಜ್ಯದ ಜನತೆಗೆ ದೇವರು ಆರೋಗ್ಯ ಸಮೃದ್ಧಿಯನ್ನು ಕರುಣಿಸಲಿ ಹಾಗೂ ಸಾಂಕ್ರಾಮಿಕ ರೋಗವು ಲೋಕದಿಂದ ಶೀಘ್ರ ತೊಲಗಿ ಸರ್ವರೂ ಆರೋಗ್ಯವಂತರಾಗಲಿ ಎಂದು ಸುಬ್ರಹ್ಮಣ್ಯನಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ ವಿ.ಭಟ್, ಪ್ರಸನ್ನ ದರ್ಬೆ, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಪುಷ್ಪಲತಾ ರಾವ್ ಇದ್ದರು.