ಮಂಗಳೂರು: ‘ದೇಶದ ಆರ್ಥಿಕತೆ ಕುಸಿಯಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೀತಿಗಳೇ ಕಾರಣ ಹೊರತು, ಕೊರೊನಾ ಅಲ್ಲ. ಲಾಕ್ಡೌನ್ಗೆ ಮೊದಲೇ ದೇಶದ ಆರ್ಥಿಕತೆ ಕುಸಿದಿತ್ತು’ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋವಿಡ್–19ನಿಂದ ಅತಿ ಹೆಚ್ಚು ಸಾವನ್ನು ಕಂಡ ಅಮೆರಿಕದ ಡಾಲರ್ ಬೆಲೆ ಕುಸಿದಿಲ್ಲ. ಅಲ್ಲಿನ ರಾಷ್ಟ್ರಗಳು ಜನರಿಗೆ ನೇರವಾಗಿ ಆರ್ಥಿಕ ನೆರವು ನೀಡುತ್ತಿವೆ’ ಎಂದರು.
‘ಕೋವಿಡ್–19’ 2019ರಲ್ಲೇ ಪತ್ತೆಯಾಗಿತ್ತು. ಆದರೆ, ಬಿಜೆಪಿ ಮಾತ್ರ ತನ್ನ ಅಧಿಕಾರ ದಾಹಕ್ಕೆ ಮಧ್ಯಪ್ರದೇಶದ ಸರ್ಕಾರವನ್ನು ಉರುಳಿಸುವ ಸಲುವಾಗಿ, ಲಾಕ್ಡೌನ್ ಮುಂದೂಡಿತು. ಮೋದಿ ಅಧಿಕಾರ ದಾಹಕ್ಕೆ ದೇಶದ ಜನತೆಯೇ ಸಂಕಷ್ಟಕ್ಕೀಡಾದರು’ ಎಂದು ಟೀಕಿಸಿದರು.
‘ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದರೂ ಭಾರತದಲ್ಲಿ ಕಡಿಮೆಯಾಗಿಲ್ಲ. ಬೆಲೆಯೇರಿಕೆ ಇಳಿದಿಲ್ಲ. ಲಾಕ್ಡೌನ್ಗೂ ಮೊದಲೇ ರಿಸರ್ವ್ ಬ್ಯಾಂಕ್ನಲ್ಲಿದ್ದ ಭದ್ರತಾ ಠೇವಣಿಯನ್ನೇ ವಾಪಸ್ ಪಡೆದಿದ್ದರು. ವಿಮಾ ಕಂಪನಿಗಳನ್ನು ಹರಾಜಿಗಿಟ್ಟಿದ್ದರು. ಜಿಯೋಗಾಗಿ ಬಿಎಸ್ಎನ್ಎಲ್ ಅನ್ನು ನಷ್ಟಕ್ಕೆ ತಂದರು. ನರೇಗಾ ಅನುದಾನ ಕಡಿತ ಮಾಡಿದ್ದರು. ಕಪ್ಪುಹಣವನ್ನು ವಾಪಸ್ ತರಲಿಲ್ಲ. ಬದಲಾಗಿ, ನೋಟು ರದ್ದತಿ ಮೂಲಕ ಬಡವರ ಹಣವನ್ನು ಬ್ಯಾಂಕಿಗೆ ಹಾಕಿಸಿ, ಉದ್ಯಮಿಗಳು ಕೊಳ್ಳೆ ಹೊಡೆದು ಪರಾರಿಯಾದರು’ ಎಂದು ವಾಗ್ದಾಳಿ ನಡೆಸಿದರು.
‘ಕೊನೆಗೂ ಕಾಂಗ್ರೆಸ್ ಆಡಳಿತದ ಅನ್ನಭಾಗ್ಯ ಹಾಗೂ ನರೇಗಾ ಯೋಜನೆಗಳೇ ಜನರ ಕೈ ಹಿಡಿದವು’ ಎಂದರು.
‘ಜಿಲ್ಲೆಯ ಮೂರು ಬ್ಯಾಂಕ್ಗಳು ಅಸ್ತಿತ್ವ ಕಳೆದುಕೊಂಡವು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪ್ರಮುಖ ಕಾಮಗಾರಿಗಳನ್ನೇ ಪೂರ್ಣಗೊಳಿಸಿಲ್ಲ. ಅತಿವೃಷ್ಟಿ ಪರಿಹಾರವನ್ನೇ ನೀಡಿಲ್ಲ’ ಎಂದು ದೂರಿದರು.
ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ಶಾಲೆಟ್ ಪಿಂಟೊ, ಅಬ್ದುಲ್ ರವೂಫ್, ಅಶೋಕ ಡಿ.ಕೆ., ಶಾಹುಲ್ ಹಮೀದ್, ಸುಬೋಧ್ ಇದ್ದರು.