ಬೆಳ್ತಂಗಡಿ: ‘ಫೇಸ್ಬುಕ್ ಪೇಜ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾರೆ’ ಎಂದು ಆರೋಪಿಸಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಚೇರಿಯಲ್ಲಿ ಕುಳಿತಿರುವ ಟೇಬಲ್ ಮುಂಭಾಗ ಹಾಗೂ ಅವರ ಬೆಂಗಳೂರಿನ ಸಿ.ಎಂ.ನಿವಾಸದ ಗೇಟ್ನ ಮೇಲೆ ‘ಕಲೆಕ್ಷನ್ ಮಾಸ್ಟರ್ (ಸಿ.ಎಂ) ಆಫ್ ಕರ್ನಾಟಕ’ ಎಂದು ಬರೆದು ಹಸ್ತದ ಗುರುತನ್ನು ತಲೆ ಕೆಳಗೆ ಮಾಡಿ ಆ ಫೋಟೊಗಳನ್ನು ಫೇಸ್ಬುಕ್ ಪೇಜ್ನಲ್ಲಿ ಶಾಸಕ ಹರೀಶ್ ಪೂಂಜ ಪೋಸ್ಟ್ ಮಾಡಿದ್ದರು. ಸರ್ಕಾರವನ್ನು ಅವಮಾನಿಸುವ ಉದ್ದೇಶದಿಂದ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾರೆ ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ದೂರು ನೀಡಿದ್ದರು.
ಬೆಳ್ತಂಗಡಿ ಠಾಣೆಯಲ್ಲಿ ಉದ್ದೇಶಪೂರ್ವಕವಾಗಿ ಅವಮಾನ, ವರ್ಗಗಳ ನಡುವೆ ದ್ವೇಷ ಉತ್ತೇಜಿಸುವ ಹೇಳಿಕೆ (ಐಪಿಸಿ 504, 505 (2)) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.