ಬೆಳ್ತಂಗಡಿ: ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ ವಾಟ್ಸಪ್ ಗುಂಪಿನ 41ನೇ ಸೇವಾ ಯೋಜನೆಯ ಭಾಗವಾಗಿ ‘ಆಸರೆ -3’ ಮನೆಯ ಕೀಲಿಕೈಯನ್ನು ಬಡಗಕಾರಂದೂರು ಗ್ರಾಮದ ರುಕ್ಮಯ ದಂಪತಿಗೆ ಹಸ್ತಾಂತರಿಸಲಾಯಿತು.
‘ಸಮಾಜದ ಅಶಕ್ತ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವುದೇ ಸಂಘಟನೆಯ ಧ್ಯೇಯವಾಗಿದೆ’ ಎಂದು ಸಂಘಟನೆಯ ಸಲಹೆಗಾರ, ಅಳದಂಗಡಿ ಸತ್ಯ ದೇವತೆ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ ಹೇಳಿದರು.
ಬೆಳ್ತಂಗಡಿ ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವತ್ಥ್ ಕುಮಾರ್ ಮಾತನಾಡಿ, 'ಮನೆ ನಿರ್ಮಾಣ ಕಾರ್ಯ ಸುಲಭದ ವಿಚಾರವಲ್ಲ. ಅಶಕ್ತ ಕುಟುಂಬಕ್ಕೆ ಆಸರೆಯಾಗಿ ನಿಂತ ಸಂಘಟನೆಯ ಕಾರ್ಯ ದೇವರು ಮೆಚ್ಚುವ ಕಾರ್ಯವಾಗಿದೆ' ಎಂದರು.
ರುಕ್ಮಯರ ಮಗಳು ತೇಜಸ್ವಿನಿ ಮಾತನಾಡಿ, 'ತಂದೆಯ ಅನಾರೋಗ್ಯ, ತಾಯಿ ಬೀಡಿ ಕಟ್ಟಿ ಜೀವನ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆಯ ಮಧ್ಯೆ ದೇವರೇ ಬಂದು ನೆರವು ನೀಡಿದಂತೆ ಸಂಘಟನೆ ನೆರವಾಗಿದೆ' ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.
ಉದ್ಯಮಿ ಸುರೇಶ್ ಪೂಜಾರಿ ಊರ, ಶಿವಾನಂದ ಹೆಗ್ಡೆ, ಶೀತಲ್ ಜೈನ್, ಮಂಗಳಾ ಕೆ ಇದ್ದರು. ಕ್ರೀಡಾ ಕ್ಷೇತ್ರದ ಸಾಧಕ ಸುಶಾಂತ್ ಪೂಜಾರಿ ಕುದ್ಯಾಡಿ ಅವರನ್ನು ಸನ್ಮಾನಿಸಲಾಯಿತು. ದೇವದಾಸ್ ಸ್ವಾಗತಿಸಿದರು. ಚಂದ್ರಹಾಸ ಬಳಂಜ ನಿರೂಪಿಸಿದರು.