ಜಾತಿ ಮೀಸಲಾತಿ ಹೋರಾಟ ಹಿಂದೂ ಧರ್ಮಕ್ಕೆ ಅಪಾಯಕಾರಿ: ರಾಜಶೇಖರನಂದ ಸ್ವಾಮೀಜಿ

ಸುಬ್ರಹ್ಮಣ್ಯ: ‘ನಮ್ಮ ಮನೆಯ ಸಂಸ್ಕೃತಿ ಬದಲಾಗಿದೆ. ಆದ್ದರಿಂದಲೇ ನಮ್ಮ ಮಕ್ಕಳು ಲವ್ ಜಿಹಾದ್ಗೆ ಬಲಿಯಾಗುತಿದ್ದಾರೆ. ನಮ್ಮ ಹಿಂದೂ ಧರ್ಮ ಸದೃಢವಾಗಿ, ರಾಜಕೀಯವಾಗಿ ಬಲಿಷ್ಠವಾಗಬೇಕಿದೆ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರನಂದ ಸ್ವಾಮೀಜಿ ಹೇಳಿದರು.
ಸುಬ್ರಹ್ಮಣ್ಯ ಹಿಂದು ಹೃದಯ ಸಂಗಮ ಸಮಿತಿ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ನಡೆದ ಬೃಹತ್ ಹಿಂದೂ ಹೃದಯ ಸಂಗಮ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ದೇಶದಲ್ಲಿ ಜಾತಿ ಮೀಸಲಾತಿ ಹೋರಾಟ ಹಿಂದೂ ಧರ್ಮಕ್ಕೆ ಅಪಾಯಕಾರಿ ಎಂದರು.
ಹುಕ್ಕೇರಿ ಇಂಚಗೇರಿ ಸಂಸ್ಥಾನ ಮಠದ ಅಭಿನವ ಮಂಜುನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಸನಾತನ ಹಿಂದೂ ಧರ್ಮ ಇಲ್ಲದಿದ್ದರೆ ನಮ್ಮ ದೇಶದಲ್ಲಿ ಯಾವುದೇ ಧರ್ಮ ಇರುತ್ತಿರಲಿಲ್ಲ. ದೇವರು ಸೃಷ್ಟಿಸಿದ ಧರ್ಮ ಇದ್ದರೆ ಅದು ಹಿಂದೂ ಧರ್ಮ ಆಗಿದೆ. ನಮ್ಮ ಹಿಂದೂ ಧರ್ಮದ ಅಸ್ತಿತ್ವಕ್ಕೆ ಹೋರಾಟ ಮಾಡುವುದಾದರೆ ನಾವು ಎಡವಿದ್ದೆಲ್ಲಿ ಎಂದು ಯೋಚಿಸ ಬೇಕಾದ ಕಾಲ ಎಂದರು.
ಉಡುಪಿ ಜಿಲ್ಲಾ ಹಿಂದೂ ಜಾಗರಣ ವೇದಿಕೆ ಸಹ ಸಂಚಾಲಕ ಶ್ರೀಕಾಂತ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿ, ಭಾರತದ ಮೊದಲ ಸಾತಂತ್ರ್ಯ ಹೋರಾಟ ಸುಬ್ರಹ್ಮಣ್ಯದ ಮಣ್ಣಿನಿಂದ ಆರಂಭವಾಗಿತ್ತು. ಅಂದು ಕೂಡ ಮೊದಲ ಬಾರಿಗೆ 13 ದಿನಗಳ ಸ್ವಾತಂತ್ರ್ಯ ಪಡೆದಿದ್ದೆವು. ಹಿಂದೂ ಯುವತಿಯರನ್ನು ಭೋಗದ ವಸ್ತುವಾಗಿ ನೋಡಿದರೆ ನಮ್ಮ ಹಿಂದೂಗಳು ಸುಮ್ಮಿನಿರುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣ ಪ್ರಸನ್ನ, ಕಾರ್ಯದರ್ಶಿ ಚಿದಾನಂದ ಕಂದಡ್ಕ ಇದ್ದರು. ಹಿಂದೂ ಹೃದಯ ಸಂಗಮ ಸಮಿತಿ ಗೌರವಾಧ್ಯಕ್ಷ ಕಿಶೋರ್ ಶಿರಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಅಧ್ಯಕ್ಷ ರಾಜೇಶ್ ಎನ್.ಎಸ್. ಸ್ವಾಗತಿಸಿದರು.
ಆರಂಭದಲ್ಲಿ ಕುಮಾರಧಾರ ದಿಂದ ರಥಬೀದಿವರೆಗೆ ಬೃಹತ್ ಶೋಭಾಯಾತ್ರೆ ನಡೆಯಿತು. ವಿವಿಧ ಭಜನಾ ತಂಡಗಳು ಕುಣಿತ ಭಜನೆಯನ್ನು ನಡೆಸಿಕೊಟ್ಟರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.