ಮಂಗಳೂರು: ಕೊರೊನಾ ಸೋಂಕಿದ್ದರೂ, ನೀಟ್ ಪರೀಕ್ಷೆ ಬರೆದಿದ್ದ ನಗರದ ಚಿರಾಗ್ ಎಸ್. ರಾವ್ ಅಖಿಲ ಭಾರತ ಮಟ್ಟದಲ್ಲಿ 450ನೇ ರ್ಯಾಂಕ್ ಗಳಿಸಿದ್ದು, ಒಬಿಸಿ ಪಟ್ಟಿಯಲ್ಲಿ 117ನೇ ಸ್ಥಾನ ಪಡೆದಿದ್ದಾರೆ.
ಒಟ್ಟು 720 ಅಂಕಗಳಿಗೆ 685 ಅಂಕ ಗಳಿಸಿರುವ ಅವರು, ನಗರದ ಚೈತನ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ.
ಕಾರ್ಮಿಕ ಹೋರಾಟಗಾರ ಶಿವಾನಂದ ಕೋಡಿ ಮತ್ತು ಸುಮನಾ ದಂಪತಿ ಪುತ್ರ. ಸಿಇಟಿ ಪರೀಕ್ಷೆಯ ಕೃಷಿ ವಿಜ್ಞಾನ ಮತ್ತು ಪಶುವೈದ್ಯಕೀಯ ವಿಭಾಗಗಳಲ್ಲಿ ಕ್ರಮವಾಗಿ 28 ಮತ್ತು 29ನೇ ಸ್ಥಾನ ಗಳಿಸಿದ್ದರು.
ನೀಟ್ ಪರೀಕ್ಷೆ ಸಂದರ್ಭ ಚಿರಾಗ್ ಕೊರೊನಾ ಸೋಂಕಿನಿಂದ ಬಳಲಿದ್ದರು. ಜಿಲ್ಲಾಡಳಿತವು ಎನ್.ಐ.ಟಿ.ಕೆ ಯಲ್ಲಿನ ಪರೀಕ್ಷಾ ಕೇಂದ್ರಕ್ಕೆ ಆಂಬುಲೆನ್ಸ್ನಲ್ಲಿ ಕರೆದುಕೊಂಡು ಹೋಗಿ, ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿತ್ತು. ಆಗ ಇವರ ತಂದೆ ಮತ್ತು ತಾಯಿ ಇಬ್ಬರೂ ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿದ್ದರು. ಈ ಎಲ್ಲ ಒತ್ತಡಗಳ ನಡುವೆಯೂ ಚಿರಾಗ್ ಸಾಧನೆ ಮಾಡಿದ್ದಾರೆ.
ಪಾಂಡಿಚೇರಿಯಲ್ಲಿರುವ ದೇಶದ ಪ್ರತಿಷ್ಠಿತ ಇಂದಿರಾಗಾಂಧಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಶಿಕ್ಷಣ ಮುಂದುವರಿಸುವ ಆಶಯವನ್ನು ಚಿರಾಗ್ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.