ಮಂಗಳೂರು: ಕಳೆದ 17 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ 167 ಮೆಸ್ಕಾಂ ಗುತ್ತಿಗೆ ಮೀಟರ್ ರೀಡರ್ಗಳನ್ನು ಏಕಾಏಕಿಯಾಗಿ ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ನಗರದ ಬಿಜೈನಲ್ಲಿರುವ ಮೆಸ್ಕಾಂ ಕಚೇರಿ ಎದುರು ಇದೇ 14ರಂದು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಂಟಕ್ ಕಾನೂನು ಸಲಹೆಗಾರ ದಿನಕರ ಶೆಟ್ಟಿ, ‘ಕಾರ್ಮಿಕರಿಗೆ ಕನಿಷ್ಠ ವೇತನ ನೀಡದೇ, ಅವರನ್ನು ಕೆಲಸದಿಂದ ತೆಗೆದು ಹಾಕಿರುವುದು ಖಂಡನೀಯ. ಅವರಿಗೆ ಮತ್ತೆ ಉದ್ಯೋಗಕ್ಕೆ ಅವಕಾಶ ಕಲ್ಪಿಸಬೇಕು’ ಎಂದರು.
ಬಂಟ್ವಾಳ ವಲಯ ಮತ್ತು ಪುತ್ತೂರು ವಲಯಕ್ಕೆ ಸಂಬಂಧಿಸಿದಂತೆ 17 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ 167 ಮೀಟರ್ ರೀಡರ್ಗಳು ಬೀದಿಗೆ ಬರುವಂತಾಗಿದೆ. ಕೆಲಸ ಕಳೆದುಕೊಂಡು ಕುಟುಂಬ ನಿರ್ವಹಿಸಲೂ ಕಷ್ಟವಾಗಿದೆ. ಇದೇ 1ರಂದು ಮೆಸ್ಕಾಂ ಅಧಿಕಾರಿಗಳನ್ನು ಭೇಟಿಯಾಗಿ 10 ದಿನಗಳೊಳಗೆ ಸಮಸ್ಯೆಇತ್ಯರ್ಥಪಡಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಅನಿವಾರ್ಯವಾಗಿ ಪ್ರತಿಭಟನೆಯ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.
ಪ್ರಮುಖರಾದ ಜಯರಾಮ ಬಂಟ್ವಾಳ, ಕರುಣಾಕರ ಬಂಟ್ವಾಳ, ಉದಯ ವಿಟ್ಲ, ಗೋಪಾಲ ವಿಟ್ಲ ಇದ್ದರು.