ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನ ಗೆಲುವಲ್ಲ, ಹಿಂದುತ್ವ ವಿಚಾರಧಾರೆಯ ಗೆಲುವು: ಕ್ಯಾ.ಬ್ರಿಜೇಶ್ ಚೌಟ

Published 4 ಜೂನ್ 2024, 15:45 IST
Last Updated 4 ಜೂನ್ 2024, 15:45 IST
ಅಕ್ಷರ ಗಾತ್ರ

ಮಂಗಳೂರು: 'ಇದು ನನ್ನ ಗೆಲುವಲ್ಲ. ಹಿಂದುತ್ವ ವಿಚಾರದ ಗೆಲುವು' ಎಂದು ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಮತ ಎಣಿಕೆ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. 'ಇಲ್ಲಿ ಸತ್ಯ ಧರ್ಮ‌, ನ್ಯಾಯಕ್ಕೆ ಜಯ ಆಗಿದೆ. ತುಳುನಾಡಿನ ದೈವ, ದೇವರ, ರಾಜ್ಯ ಹಾಗೂ ರಾಷ್ಟ ನಾಯಕರ ಆಶೀರ್ವಾದ ನನಗೆ ಸಿಕ್ಕಿದೆ. ಪಕ್ಷಕ್ಕಾಗಿ ಬಲಿದಾನ ಮಾಡಿದ ದಿಗ್ಗಜರಿಗೆ ಹಾಗೂ ಬೂತ್ ಮಟ್ಟದ ಕಾರ್ಯಕರ್ತರಿಗೆ ಈ ಗೆಲುವನ್ನು ಅರ್ಪಿಸುತ್ತೇನೆ' ಎಂದರು.

'ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಭದ್ರಕೋಟೆ. ಇದು ಯಾವತ್ತೂ ಹೀಗೆಯೇ ಇರಲಿದೆ. ಕಾಂಗ್ರೆಸ್ ಮತ್ತು ಎಸ್ ಡಿಪಿಐ ಒಟ್ಟಾಗಿ ಚುನಾವಣೆ ಎದುರಿಸಿದ್ದರಿಂದ ನಾವು ಮತ್ತಷ್ಟು ಎಚ್ಚರಿಕೆಯಿಂದ ಚುನಾವಣೆ ಎದುರಿಸಿದ್ದೆವು. ಹೆಚ್ಚು ಪರಿಶ್ರಮ ಹಾಕಿದ್ದೆವು' ಎಂದು ತಿಳಿಸಿದರು.

ಜಾತಿ ಆಧಾರದಲ್ಲಿ ಚುನಾವಣೆ ನಡೆದಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಬಿಜೆಪಿಯ ಪಡಸಾಲೆಯಲ್ಲಿ ಜಾತಿ ಬಗ್ಗೆ ಚರ್ಚೆ ನಡೆಯುವುದಿಲ್ಲ. ಹಿಂದುತ್ವದ ಬಗ್ಗೆ ಚರ್ಚೆ ಆಗುತ್ತದೆ. ಸಾಮಾಜಿಕ ನ್ಯಾಯ,  ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಕುರಿತು ಚರ್ಚೆ ನಡೆಯುತ್ತದೆ. ನಾವು ರಾಷ್ಟ್ರೀಯತೆ ಆಧಾರದಲ್ಲಿ ಚುನಾವಣೆ ಎದುರಿಸಿದ್ದೇವೆ. ಜಿಲ್ಲೆಯ ಜನ ಅಭಿವೃದ್ಧಿಗೆ ಬೆಂಬಲ ನೀಡುವವರು. ಮನಸು ಒಡೆಯುವವರಿಗೆ ಇಲ್ಲಿನ ಜನ ಬೆಂಬಲ ನೀಡುವುದಿಲ್ಲ. ಎಲ್ಲರನ್ನು ಒಟ್ಟಾಗಿ ಕರೆದೊಯ್ಯುತ್ತೇನೆ' ಎಂದರು.

'ಹಿಂದುತ್ವ ಕ್ಕೆ ಬದ್ಧತೆ ಇಟ್ಟುಕೊಂಡು, ಅಭಿವೃದ್ಧಿಗೆ ಆದ್ಯತೆ ನೀಡಿ, ಹಿರಿಯರ ಮಾರ್ಗದರ್ಶನ ಪಡೆದು ಕೆಲಸ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಶ್ರಮಿಸುತ್ತೇನೆ. ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ‘ನವ ಯುಗ ನವ ಪಥ’ ಎಂಬ ಒಂಬತ್ತು ಆದ್ಯತಾ ಕಾರ್ಯಸೂಚಿ ರೂಪಿಸಿಕೊಂಡಿದ್ದು, ಅದಕ್ಕನುಗುಣವಾಗಿ ಕಾರ್ಯನಿರ್ವಹಿಸುತ್ತೇನೆ. ಹೊಸ ಕನಸುಗಳೊಂದಿಗೆ, ಜಿಲ್ಲೆಯನ್ನು ಹೊಸ ದಿಕ್ಕಿನತ್ತ ಕೊಂಡೊಯ್ತುತ್ತೇವೆ' ಎಂದರು.

'ನಮಗೆ ಕಳೆದ ಚುನಾವಣೆಯಲ್ಲಿ ಬಿದ್ದಷ್ಟು ಮತಗಳು ಈ ಸಲವೂ ಬಿದ್ದಿವೆ. ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಒಟ್ಟಾಗಿದ್ದರಿಂದ ಅಂತರ ಕಡಿಮೆಯಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬುದ್ಧಿವಂತ ಮತದಾರರು ನಮ್ಮ ಪಕ್ಷಕ್ಕೆ ಅಭೂತಪೂರ್ವ ಗೆಲುವು ಒದಗಿಸಿದ್ದಾರೆ. ಅಭಿವೃದ್ಧಿ ಕೆಲಸವನ್ನು ಚೆನ್ನಾಗಿ ಕೆಲಸ ಮಾಡುವ ಸವಾಲು ನಮ್ಮ ಮುಂದಿದೆ.
ಸತೀಶ ಕುಂಪ‍ಲ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ
ಜಿಲ್ಲೆಯ ಮತದಾರರ ತೀರ್ಪನ್ನು ಸ್ವೀಕರಿಸುತ್ತೇವೆ. ಕಾಂಗ್ರೆಸ್ ಸೋಲಿನ ಬಗ್ಗೆ ಪರಾಮರ್ಶಿಸುತ್ತೇವೆ. ಸೋಲನ್ನು ಸವಾಲಾಗಿ ಸ್ವೀಕರಿಸುತ್ತೇವೆ.
ಕೆ.ಹರೀಶ್ ಕುಮಾರ್, ಅಧ್ಯಕ್ಷರು, ದಕ್ಷಿಣ ಕನ್ನಡ.ಜಿಲ್ಲಾ ಕಾಂಗ್ರೆಸ್ ಸಮಿತಿ
ಜನಾದೇಶವನ್ನು ವಿನಮ್ರವಾಗಿ ಸ್ವೀಕರಿಸುತ್ತೇವೆ. ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಜನತೆ ತೀರ್ಪು ನೀಡಿದ್ದಾರೆ. ಸರ್ವಾಧಿಕಾರವನ್ನು ತಿರಸ್ಕರಿಸಿದ್ದಾರೆ
ಮಂಜುನಾಥ ಭಂಡಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT