ಕಡಬ(ಉಪ್ಪಿನಂಗಡಿ): ಲಾಕ್ಡೌನ್ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡಿರುವ ತಂಡವೊಂದು ಕೊಯಿಲ ಸರ್ಕಾರಿ ಶಾಲೆಯ ಜಗುಲಿಯಲ್ಲಿ ಮಾಂಸದೂಟ ತಯಾರಿಸಿ ಮೋಜು ಮಸ್ತಿ ನಡೆಸಿರುವುದು ಬೆಳಕಿಗೆ ಬಂದಿದೆ.
ಗುರುವಾರ ರಾತ್ರಿ ವೇಳೆ ಕಾರು, ಬೈಕ್ನಲ್ಲಿ ಬಂದ ಸುಮಾರು 10 ಮಂದಿ ಇದ್ದ ತಂಡವೊಂದು ಶಾಲೆಯ ಜಗುಲಿ, ಆವರಣದಲ್ಲಿ ಕಲ್ಲು ಇಟ್ಟು ಒಲೆ ಮಾಡಿಕೊಂಡು ಮಾಂಸದೂಟ ತಯಾರಿಸಿ ನಡೆಸಿರುವುದು ಹಾಗೂ ಅಲ್ಲಿಯೇ ಬೀಡಿ, ಸಿಗರೇಟುಗಳ ತಂಡುಗಳನ್ನು ಎಸೆದಿರುವುದು ಪತ್ತೆಯಾಗಿದೆ.
ರಾತ್ರಿ ಗಾಳಿ–ಮಳೆಯಿಂದಾಗಿ ಈ ಪರಿಸರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಈ ಕಾರಣ ಸ್ಥಳೀಯ ನಿವಾಸಿಗಳು ವಿದ್ಯುತ್ ತಂತಿ ಮೇಲೆ ಮರ ಬಿದ್ದಿರುವ ಸಾಧ್ಯತೆ ಇರುವ ಬಗ್ಗೆ ಪರಿಶೀಲಿಸುವ ಸಲುವಾಗಿ ಶಾಲೆ ಪರಿಸರಕ್ಕೆ ಬಂದಿದ್ದರು. ಆಗ ಪಕ್ಕದಲ್ಲಿ ವಾಹನಗಳು ನಿಂತಿರುವುದನ್ನು ಕಂಡು ಶಾಲೆ ಆವರಣದೊಳಗೆ ನೋಡಿದಾಗ, ಮೋಜು, ಮಸ್ತಿಯಲ್ಲಿ ತೊಡಗಿದ್ದವರು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಸ್ಥಳೀಯರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ.