ಮೂಡುಬಿದಿರೆ: ‘ಸ್ವಾತಂತ್ರ್ಯದ ಅಮೃತ ಮಹೋತ್ಸವವು ದೇಶದಲ್ಲಿನ ಸಾಮಾಜಿಕ, ಆರ್ಥಿಕ ಅಂತರಗಳನ್ನು ಅಳಿಸಿ ಹಾಕಲಿ. ಸ್ವಾತಂತ್ರ್ಯದ ಆಶಯವು ಅನುಷ್ಠಾನಗೊಳ್ಳಲಿ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.
ಇಲ್ಲಿನ ಕನ್ನಡ ಭವನದಲ್ಲಿ ಕಾರ್ಕಳದ ಯಕ್ಷ ರಂಗಾಯಣವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಸಹಯೋಗದಲ್ಲಿ ಹಮ್ಮಿಕೊಂಡ ‘ಅಮರಕ್ರಾಂತಿ ಸ್ವಾತಂತ್ರ್ಯ ಹೋರಾಟ - 1837’ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಗಳು ಜನ ಮರುಳು, ಜಾತ್ರೆ ಮರುಳೋ ಎಂಬ ಕಾರ್ಯಕ್ರಮಗಳಲ್ಲ. ಅದು ನಮ್ಮ ಸ್ವಾತಂತ್ರ್ಯದ ಅವಲೋಕನ ಹಾಗೂ ಭವಿಷ್ಯದ ದಿಕ್ಸೂಚಿ ಆಗಬೇಕು. ನಾವೆಲ್ಲ ಸ್ವಾತಂತ್ರ್ಯದ ಹೋರಾಟವನ್ನು ಕಣ್ಣಾರೆ ನೋಡಿದವರಲ್ಲ. ನಮಗೆ ಆ ಅನುಭವ ಇಲ್ಲ. ಕತೆಯಂತೆ ಕೇಳಿದ್ದೇವೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯದ ನೆನಪು ಮೆಲುಕು ಹಾಕುವ ಕಾರ್ಯವನ್ನು ಈ ನಾಟಕ ಮಾಡುತ್ತಿದೆ ಎಂದರು.
ಸ್ವಾತಂತ್ರ್ಯದ ಬಳಿಕ ದೇಶಕ್ಕೆ ಹೊಸ ದಿಕ್ಕು, ಸ್ವದೇಶಿ ಚಿಂತನೆ ದೊರೆತಿದೆ. ಆದರೆ, ಸಮಸ್ಯೆಗಳೂ ಇವೆ. ಇನ್ನೂ ಆರ್ಥಿಕ, ಸಾಮಾಜಿಕ ಮತ್ತಿತರ ಅಸಮಾನತೆಗಳಿದ್ದು, ಈ ಅಂತರವನ್ನು ಅಳಿಸಿ ಹಾಕಬೇಕಾಗಿದೆ. ದೇಶದಲ್ಲಿನ 46 ಕೋಟಿ ವಿದ್ಯಾರ್ಥಿಗಳೇ ನಮ್ಮ ಭರವಸೆ ಎಂದರು.
ಯಕ್ಷ ರಂಗಾಯಣದ ನಿರ್ದೇಶಕ ಜೀವನ ರಾಂ ಸುಳ್ಯ ಮಾತನಾಡಿದರು. ಪುರಸಭೆ ಅಧ್ಯಕ್ಷ ಪ್ರಸಾದ್, ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಇದ್ದರು.
ಪ್ರಭಾಕರ ಶಿಶಿಲ ಬರೆದ ನಾಟಕವು ಜೀವನ ರಾಂ ಸುಳ್ಯ ನಿರ್ದೇಶನದಲ್ಲಿ ಮೂಡಿಬಂತು. ಯಕ್ಷ ರಂಗಾಯಣ ಹಾಗೂ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಅಭಿನಯಿಸಿದರು.