ಮಂಗಳೂರು: ಉದ್ಯೋಗ, ಶಿಕ್ಷಣ ಸೇರಿದಂತೆ ನಿತ್ಯವೂ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು, ಹೋಗುವವರಿಗೆ ಪಾಸ್ ವ್ಯವಸ್ಥೆ ಪುನರಾರಂಭಿಸಲು ಕಾಸರಗೋಡು ಜಿಲ್ಲಾಡಳಿತ ನಿರ್ಧರಿಸಿದೆ.
ಕೋವಿಡ್ ಸೋಂಕಿನ ಕಾರಣದಿಂದ ಅಂತರರಾಜ್ಯ ಪ್ರಯಾಣವನ್ನು ಕೇರಳ ರಾಜ್ಯ ಸರ್ಕಾರ ನಿರ್ಬಂಧಿಸಿತ್ತು. ಬ್ಯಾಂಕ್ ಸೇರಿದಂತೆ ಸೀಮಿತ ಕ್ಷೇತ್ರದ ನೌಕರರಿಗಷ್ಟೇ ಪಾಸ್ ನೀಡಲಾಗುತ್ತಿತ್ತು. ಇದರಿಂದ ಉಳಿದ ವಲಯಗಳ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿತ್ತು.
ಈ ಸಂಬಂಧ ಸೋಮವಾರ ಕಾಸರಗೋಡು ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್, ನಿತ್ಯ ಕರ್ನಾಟಕಕ್ಕೆ ಬಂದು ಹೋಗುವವರಿಗೆ ಪಾಸ್ ನೀಡುವುದಾಗಿ ಪ್ರಕಟಿಸಿದರು.
ಪರೀಕ್ಷೆ ಕಡ್ಡಾಯ: ‘ಪಾಸ್ ಪಡೆದು ಕರ್ನಾಟಕಕ್ಕೆ ಹೋಗಿ, ಬರುವವರು ವಾರಕ್ಕೊಮ್ಮೆ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷಾ ಕಿಟ್ ಮೂಲಕ ಕೋವಿಡ್ ಸೋಂಕು ಪತ್ತೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕರ್ನಾಟಕಕ್ಕೆ ಆಹಾರ ಉತ್ಪನ್ನಗಳನ್ನು ಸಾಗಿಸುವ ವಾಹನಗಳ ಸಿಬ್ಬಂದಿಯೂ ಈ ರೀತಿ ಪರೀಕ್ಷೆಗೆ ಒಳಗಾಗಬೇಕು’ ಎಂದು ಚಂದ್ರಶೇಖರನ್ ತಿಳಿಸಿದರು.
ವಿವಾಹ, ಮರಣ ಮತ್ತಿತರ ಕಾರಣಗಳಿಗಾಗಿ ಅಂತರರಾಜ್ಯ ಪ್ರಯಾಣ ಮಾಡುವುದಕ್ಕೂ ಕೇರಳ ಸರ್ಕಾರ ಅನುಮತಿ ನೀಡಿದೆ. ಅಂತಹವರು ಕೂಡ ಏಳು ದಿನಗಳೊಳಗೆ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ. ಕೋವಿಡ್ ಸೋಂಕು ಪತ್ತೆಯಾದ ಕ್ಲಸ್ಟರ್ಗಳ ಹೊರತಾದ ಪ್ರದೇಶಗಳಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 9 ಗಂಟೆಯವರೆಗೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.