ಮೂಲ್ಕಿ (ದಕ್ಷಿಣ ಕನ್ನಡ): ಕಟೀಲು ದುರ್ಗಾಪರಮೇಶ್ವರಿ ಮೇಳದ ಕಲಾವಿದ ಗುರುವಪ್ಪ ಬಾಯಾರು (58) ಅವರು ಗುರುವಾರ ರಾತ್ರಿ ಯಕ್ಷಗಾನದ ರಂಗಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ.
ಸರಸ್ವತಿ ಸದನದಲ್ಲಿ ಕಟೀಲು ನಾಲ್ಕನೇ ಮೇಳದ ಯಕ್ಷಗಾನ ಬಯಲಾಟದ ತ್ರಿಜನ್ಮ ಮೋಕ್ಷ ಪ್ರಸಂಗ ನಡೆಯುತಿತ್ತು. ಬಾಯಾರು ಅವರು ಶಿಶುಪಾಲನ ಪಾತ್ರ ನಿರ್ವಹಿಸಿದ್ದರು. ಪ್ರಸಂಗದ ಕೊನೆಯ ಭಾಗ ಪ್ರದರ್ಶನಗೊಳ್ಳುತ್ತಿತ್ತು. ಆ ಸಂದರ್ಭದಲ್ಲಿ ರಂಗಸ್ಥಳದಲ್ಲಿ ನಿಂತಿದ್ದ ಗುರುವಪ್ಪ ಬಾಯಾರು ಅವರು ರಂಗಸ್ಥಳದಿಂದ ಕೆಳಗೆ ಕುಸಿದುಬಿದ್ದರು.
ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು.
ಅಷ್ಟಮಂಗಲ ಪ್ರಸಂಗವನ್ನೂ ಬರೆದಿದ್ದ ಅವರು ಕಳೆದ ಮಳೆಗಾಲದಲ್ಲಿ ಮಂಗಳೂರು ಪುರಭವನದಲ್ಲಿ ಯಕ್ಷಗಾನವನ್ನು ಆಡಿಸಿದ್ದರು. ನಾನಾ ಮೇಳಗಳಲ್ಲಿ ತಿರುಗಾಟ ನಡೆಸಿದ್ದ ಅವರು 2013ರಲ್ಲಿ ಕಟೀಲು ಮೇಳಕ್ಕೆ ಸೇರಿದ್ದರು. ಮಧುಕೈಟಭ, ಮುಂತಾದ ಕಿರೀಟ ವೇಷಗಳನ್ನು ಮಾಡುತ್ತಿದ್ದ ಅವರಿಗೆ ಅನೇಕ ಸನ್ಮಾನಗಳು ಸಂದಿವೆ.