ಕೊಟ್ಟಿಗೆಹಾರ: ಲಾಕ್ಡೌನ್ನಿಂದಾಗಿ ವಾಹನ ಬಳಸಲು ಅನುಮತಿ ಇಲ್ಲದ ಕಾರಣ, ಅಗತ್ಯ ವಸ್ತುಗಳನ್ನು ಖರೀದಿಸಲು ಪಟ್ಟಣಕ್ಕೆ ಬರಲು ಗ್ರಾಮೀಣ ಭಾಗದ ಜನರು ಸೋಮವಾರ ತೀವ್ರ ತೊಂದರೆ ಅನುಭವಿಸಿದರು.
ಚಾರ್ಮಾಡಿ ಘಾಟಿಯ ಅಲೇಖಾನ್ ಗ್ರಾಮಸ್ಥರು, ಕೊಟ್ಟಿಗೆಹಾರದಿಂದ ದಿನಸಿ ವಸ್ತುಗಳನ್ನು ಖರೀದಿಸಿ, ವಾಹನ ಸೌಲಭ್ಯ ಇಲ್ಲದ್ದರಿಂದ ತಲೆಯ ಮೇಲೆ ಹೊತ್ತುಕೊಂಡು 8 ಕಿ.ಮೀ ದೂರದ ತಮ್ಮ ಗ್ರಾಮವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದರು.
ಸೋಮವಾರದಿಂದ ಲಾಕ್ಡೌನ್ ನಿಯಮಗಳು ಬಿಗಿಗೊಂಡಿದ್ದು, ಆಟೊ ಮತ್ತು ಇತರೆ ವಾಹನಗಳು ಅಲಭ್ಯವಾದ್ದರಿಂದ ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ಬರುವವರು ತೀವ್ರ ತೊಂದರೆ ಅನುಭವಿಸಿದರು.
‘ಬೆಳಿಗ್ಗೆ 10 ಗಂಟೆಯೊಳಗೆ 8 ಕಿ.ಮೀ ದೂರದಿಂದ ನಡೆದುಕೊಂಡು ಬಂದು, ಕೊಟ್ಟಿಗೆಹಾರದ ದಿನಸಿ ಅಂಗಡಿಯಿಂದ ಸಾಮಾನು ಕೊಂಡುಕೊಂಡು, ಮತ್ತೆ ಗ್ರಾಮಕ್ಕೆ ನಡೆದುಕೊಂಡು ಹೋದೆವು, ಎಂದು ಗ್ರಾಮಸ್ಥ ಸುರೇಶ್ ಮತ್ತಿತರರು ಹೇಳಿದರು.
ದೂರದ ಗ್ರಾಮೀಣ ಭಾಗದ ಜನರಿಗೆ ಕನಿಷ್ಠ ಆಟೊ ಸೌಲಭ್ಯವನ್ನಾದರೂ ಕಲ್ಪಿಸಬೇಕು ಎಂದು ಅಲೇಖಾನ್ ಗ್ರಾಮಸ್ಥರು ಆಗ್ರಹಿಸಿದರು.