ಮಂಗಳೂರು: ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ‘ಸ್ವಚ್ಛ ಭಾರತ ಲೀಗ್’ ವಿಶೇಷ ಪುರಸ್ಕಾರಕ್ಕೆ ಮಂಗಳೂರು ಮಹಾನಗರ ಪಾಲಿಕೆ ಪಾತ್ರವಾಗಿದೆ. 3 ಲಕ್ಷದಿಂದ 10 ಲಕ್ಷದ ಒಳಗೆ ಜನಸಂಖ್ಯೆಯ ನಗರಗಳ ವಿಭಾಗದಲ್ಲಿ ಈ ಪ್ರಶಸ್ತಿ ದೊರೆತಿದೆ
‘ಸ್ವಚ್ಛ ಭಾರತ ಅಭಿಯಾನ’ದ ಅಡಿಯಲ್ಲಿ ನಡೆದ ಈ ಸ್ಪರ್ಧೆಯಲ್ಲಿ, ದೇಶದ 1,850ಕ್ಕೂ ಅಧಿಕ ನಗರ ಮತ್ತು ಸ್ಥಳೀಯ ಸಂಸ್ಥೆಗಳು ಭಾಗವಹಿಸಿದ್ದವು. ‘ತ್ಯಾಜ್ಯ ಮುಕ್ತ ನಗರ’ ಪರಿಕಲ್ಪನೆಯನ್ನು ಸಾಕಾರಗೊಳಿಸಲು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ ನಗರಗಳನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ದೆಹಲಿಯ ತಲ್ಕಟೋರಾ ಮೈದಾನದಲ್ಲಿ ಸೆ.30ರಂದು ನಡೆಯಲಿರುವ ‘ಸ್ವಚ್ಛ ನಗರ ಸಂವಾದ ಮತ್ತು ತಂತ್ರಜ್ಞಾನ ಪ್ರದರ್ಶನ’ದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕೇಂದ್ರ ಸರ್ಕಾರದ ‘ಸ್ವಚ್ಛ ಭಾರತ ಅಭಿಯಾನ’ದ ಜಂಟಿ ನಿರ್ದೇಶಕಿ (ನಗರ ವಿಭಾಗ) ರೂಪಾ ಮಿಶ್ರಾ ತಿಳಿಸಿದ್ದಾರೆ.