ವಿಟ್ಲ: ಬಾವಿಗೆ ರಿಂಗ್ ಹಾಕುವ ಕಾಮಗಾರಿ ಮಾಡುತ್ತಿದ್ದಾಗ ಬಾವಿಯೊಳಗೆ ಆಮ್ಲಜನಕ ಸಿಗದೆ ಮೃತಪಟ್ಟ ಬಾಕ್ರಬೈಲು ಸಮೀಪದ ಮಲಾರು ನಿವಾಸಿ ಮಹಮ್ಮದಲಿ (21) ಹಾಗೂ ಪರ್ತಿಪಾಡಿಯಲ್ಲಿ ನೆಲೆಸಿರುವ ಇಬ್ರಾಹಿಂ (36) ಅವರ ನಿವಾಸಕ್ಕೆ ಬುಧವಾರ ಬಂಟ್ವಾಳ ತಾಲ್ಲೂಕು ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ಮತ್ತು ಸದಸ್ಯರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಆರ್ಥಿಕ ನೆರವು ನೀಡುವುದಾಗಿ ಹೇಳಿದರು.
ಕುಟುಂಬಕ್ಕೆ ಮಾಸಿಕ ₹3 ಸಾವಿರ ಮೊತ್ತದಂತೆ ಒಂದು ವರ್ಷದ ರೇಶನ್, ಸಹೋದರನ ವಿದ್ಯಾಭ್ಯಾಸಕ್ಕೆ ನಿರಂತರ ನೆರವು ನೀಡಲು ಜಮೀಯ್ಯತುಲ್ ಫಲಾಹ್ ತೀರ್ಮಾನಿಸಿದೆ. ಸಂಸ್ಥೆಯ ಸದಸ್ಯರಾದ ಹರ್ಷದ್ ಸರವು, ಉಬೈದ್ ವಿಟ್ಲ, ಹರ್ಷದ್ ಕುಕ್ಕಿಲ, ಹಾರಿಸ್ ಕೊಡಂಗಾಯಿ, ಅಮಾನ್ ವಿಟ್ಲ ಇದ್ದರು.
ವಿಟ್ಲ ಜಮಾತ್ ಅಧ್ಯಕ್ಷ ಆಶ್ರಫ್ ಮೊಹಮ್ಮದ್ ಪೊನ್ನೋಟು, ಉಪಾಧ್ಯಕ್ಷ ಮೊಹಮ್ಮದ್ ಗಮಿ, ಜಮಾಅತ್ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ಆಡಳಿತ ಸಮಿತಿ ಕಾರ್ಯದರ್ಶಿ ನೋಟರಿ ವಕೀಲ ಕೆ. ಅಬೂಬಕರ್, ವಿಟ್ಲ ಜಮಾಅತ್ ಖತೀಬ್ ಕೆ.ಎಂ ಅಬ್ಬಾಸ್ ಪೈಝಿ, ಮುಅಝೀನ್ ಹಕೀಮ್ ಮುಸ್ಲಿಯಾರ್ ಮೃತರ ಕುಟುಂಬಕ್ಕೆ ಭೇಟಿ ನೀಡಿದ ಸಾಂತ್ವನ ಹೇಳಿದರು.
ಮೃತರ ಇಬ್ಬರು ಮಕ್ಕಳಾದ ಮೊಹಮ್ಮದ್ ಇರ್ಫಾನ್ 5ನೇ ತರಗತಿ ಮತ್ತು ಮೊಹಮ್ಮದ್ ಇಶಾನ್ 3ನೇ ತರಗತಿಯಲ್ಲಿ ವಿಟ್ಲ ಜಮಾತ್ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲಿನಲ್ಲಿ ಕಲಿಯುತ್ತಿದ್ದು ಇವರಿಗೆ ಹತ್ತನೇ ತರಗತಿವರೆಗೆ ಇದೇ ಶಾಲೆಯಲ್ಲಿ ಉಚಿತ ವಿದ್ಯಾಭ್ಯಾಸ ಕೊಡುವುದಾಗಿ ಜಮಾತ್ ಅಧ್ಯಕ್ಷರು ಹೇಳಿದರು.