ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರಿನಲ್ಲಿ ಅಧಿಕಾರಿಗಳ ಬೆವರಿಸಿದ ‘ಮಾಸ್ಕ್‌’‘ ಬೊಮ್ಮಾಯಿ ಸಭೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಕೋವಿಡ್‌ ನಿಯಂತ್ರಣ ಸಭೆ
Last Updated 12 ಆಗಸ್ಟ್ 2021, 15:14 IST
ಅಕ್ಷರ ಗಾತ್ರ

ಮಂಗಳೂರು: ನಗರದಲ್ಲಿ ಗುರುವಾರ ನಡೆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಕೋವಿಡ್‌ ಪರಿಶೀಲನಾ ಸಭೆಯಲ್ಲಿ ಶಾಸಕ ಯು.ಟಿ. ಖಾದರ್‌ ಪ್ರಸ್ತಾಪಿಸಿದ ಮಾಸ್ಕ್‌ ಹಾಗೂ ಪಿಪಿಇ ಕಿಟ್‌ ಕೊರತೆ ವಿಚಾರವು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಮೇಲೆ ಮುಖ್ಯಮಂತ್ರಿ ಹರಿಹಾಯುವಂತೆ ಮಾಡಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮಾತನಾಡಿ, ಸಂಭಾವ್ಯ ಕೋವಿಡ್ 3ನೇ ಅಲೆ ಪ್ರಾರಂಭವಾಗುವ ಮೊದಲೇ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ, ವೈದ್ಯಕೀಯ ಆಮ್ಲಜನಕದ ಕೊರತೆ ಇಲ್ಲ, ಕೋವಿಡ್‌ ಆರೈಕೆ ಕೇಂದ್ರಗಳ ಸೂಕ್ತ ರೀತಿ ನಿರ್ವಹಣೆಯಾಗಬೇಕು ಎಂದರು.

ಇದೇ ಸಂದರ್ಭ ಮಾತನಾಡಿದ ಶಾಸಕ ಖಾದರ್‌, ಎನ್‌–95 ಮಾಸ್ಕ್‌ ಮತ್ತು ಪಿಪಿಇ ಕಿಟ್‌ ಕೊರತೆ ಪ್ರಸ್ತಾಪಿಸಿದರು. ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ‘ಮಾಸ್ಕ್‌ ಕೊರತೆ ಇದೆ, ರೈಲ್ವೆ ನಿಲ್ದಾಣ, ಗಡಿ, ಹೆದ್ದಾರಿ ತಪಾಸಣೆ ವೇಳೆ ಬಳಕೆಗೆ ಅಭಾವ ಇದೆ. ಪಿಪಿಇ ಕಿಟ್‌ ಕೊರತೆ ಇಲ್ಲ ಎಂದು ಉತ್ತರಿಸುತ್ತಿದ್ದಂತೆ ಮುಖ್ಯಮಂತ್ರಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರನ್ನು ತರಾಟೆಗೆ ತೆಗೆದುಕೊಂಡರು.

‘ಜಿಲ್ಲಾಧಿಕಾರಿಯವರೇ ಹೀಗೇಕಾಗುತ್ತಿದೆ ಎಂದು ಪ್ರಶ್ನಿಸಿದರು. ಇದೇ ವೇಳೆ ನಕಾರಾತ್ಮಕ ಉತ್ತರ ನೀಡಿದ ಆರೋಗ್ಯಾಧಿಕಾರಿಯನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು.‘ಜಿಲ್ಲಾ ಮಟ್ಟದ ಅಧಿಕಾರಿ ನೀವು, ನೀವೇನು ನಿದ್ದೆ ಮಾಡ್ತಿದ್ರಾ? ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು ತಾನೇ? ’ ಎಂದು ಗದರಿದರು. ಕೊನೆಗೆ ಜಿಲ್ಲೆಯಲ್ಲಿ ಎನ್–95 ಮಾಸ್ಕ್‌ಗಳು, ಪಿಪಿಇ ಕಿಟ್‍ಗಳು ಮತ್ತು ಹ್ಯಾಂಡ್‌ ಗ್ಲೌಸ್‌ಗಳ ಕೊರತೆ ಇದ್ದಲ್ಲಿ, ಎಸ್.ಡಿ.ಆರ್.ಎಫ್ ಅನುದಾನದಲ್ಲಿ ಸ್ಥಳೀಯವಾಗಿ ಖರೀದಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಆದರೆ, ಸಭೆಯ ಕೊನೆಯಲ್ಲಿ ಜಿಲ್ಲಾಡಳಿತ ಕೋವಿಡ್‌ ನಿಯಂತ್ರಣ ಕ್ರಮದ ಬಗ್ಗೆ ಪ್ರಶಂಸಿಸಿದರು. ‘ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ, ಅವರನ್ನು ಅಭಿನಂದಿಸುತ್ತೇನೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಜೆಡಿಎಸ್‌ನ ಭೋಜೆ ಗೌಡ ಅವರು ಕೋವಿಡ್‌ ಸಮಸ್ಯೆ ಬಗ್ಗೆ ಸುದೀರ್ಘ ಮಾತನಾಡಿದಾಗ, ಮಧ್ಯೆ ಮಧ್ಯೆ ಮುಖ್ಯಮಂತ್ರಿ ಮಾತಿಗೆ ತಮ್ಮ ಒಕ್ಕಣೆ ಸೇರಿಸಿದಾಗ ‘ನೀನು ತುಂಬಾ ಸ್ಪೀಡ್‌ ಇದ್ದಿ ಗೌಡ’ ಎಂದು ಮಾತಲ್ಲೇ ಅವರನ್ನು ನಿಯಂತ್ರಿಸಿದರು. ಅದೇ ರೀತಿ ಕಾಂಗ್ರೆಸ್ ಪಕ್ಷದ ಶಾಸಕ ಯು.ಟಿ. ಖಾದರ್‌ ಅವರ ಮಾತನ್ನೂ ಅಲ್ಲಲ್ಲೇ ತಡೆಹಿಡಿದರು. ‘ನಿಮ್ಮ ಕಾಲದಲ್ಲಿ ಆಗದ್ದನ್ನು ನಾವು ಮಾಡುತ್ತಿದ್ದೇವೆ ತಾಳಿ' ಎಂದು ಸುಧಾಕರ್‌ ಅವರೂ ದನಿ ಗೂಡಿಸಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ನಿತಿನ್ ಕುಮಾರ್, ಬೆಂಗಳೂರಿನ ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಸಂತೋಷ ರೈ ಬೊಳಿಯಾರ್, ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಉಪಮೇಯರ್‌ ಸುಮಂಗಲಾ ರಾವ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದ್ದರು.

ತುಳುವಿಗೆ ಗೌರವ ಕೇಳಿದ ಪೂಂಜಾ

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗುರುವಾರ ನಡೆಯುತ್ತಿದ್ದುದು ಕೋವಿಡ್‌ ನಿಯಂತ್ರಣ ಸಭೆ ಆಗಿದ್ದರೂ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್‌ ಪೂಂಜಾ ತಮ್ಮ ಸರದಿ ಬಂದಾಗ ತುಳು ಭಾಷೆಯಲ್ಲಿ ಮಾತನ್ನಾರಂಭಿಸಿದರು. ಕೊನೆಗೆ ತುಳು ಭಾಷೆಗೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸ್ಥಾನ ನೀಡುವಂತೆ ಆಗ್ರಹಿಸಿದರು.

ಮಾತನಾಡುವ ಧಾವಂತದಲ್ಲಿ 8ನೇ ಪರಿಚ್ಛೇದ 18ನೇ ಪರಿಚ್ಛೇದವಾದಾಗ ಸಹವರ್ತಿಗಳು ಅವರನ್ನು ತಿದ್ದಿದರು. ಬಳಿಕ ಕೋವಿಡ್‌ ಸಮಸ್ಯೆ ಬಗ್ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT