ಮಂಗಳೂರು: ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನದ ಬಳಿ ದಸರಾ ಉತ್ಸವದ ಸಂದರ್ಭದಲ್ಲಿ ಬೀದಿ ಬದಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಮಟ್ಕಾ ಸೋಡಾ ಮಾರಾಟ ಮಳಿಗೆಯಲ್ಲಿ ಕೊಳಕು ನೀರಿನಲ್ಲಿ ಮಡಿಕೆಗಳನ್ನು ಮುಳುಗಿಸಿ, ಅದರಲ್ಲೇ ಸೋಡಾ ಮಾರಾಟ ಮಾಡುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆಯೇ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ಆ ಮಳಿಗೆಯ ತಪಾಸಣೆ ನಡೆಸಿದ್ದು, ಅದನ್ನು ಮುಚ್ಚಿಸಿದ್ದಾರೆ. ದಸರಾ ಉತ್ಸವದ ಸಂದರ್ಭದಲ್ಲಿ ಬಟಾಟೆ ಟ್ವಿಸ್ಟರ್, ಲೈಮ್ ಸೋಡಾ, ಗೋಭಿ ಮಂಚೂರಿ, ಕಬ್ಬಿನಹಾಲು ಮುಂತಾದ ಆಹಾರ ಪದಾರ್ಥ ಮಾರಾಟ ಮಾಡುವ ತಾತ್ಕಾಲಿಕ ಮಳಿಗೆಗಳನ್ನೂ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಜಾತ್ರೆ ಸಂದರ್ಭದಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುವಾಗ ಶುಚಿತ್ವದ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದಾರೆ.
‘ಕೊಳಕು ನೀರಿನಲ್ಲಿ ಮಡಿಕೆ ತೊಳೆದು ಅದರಲ್ಲೇ ಗ್ರಾಹಕರಿಗೆ ಪಾನೀಯ ನೀಡುತ್ತಿರುವ ಮಾಹಿತಿ ಬಂದ ತಕ್ಷಣವೇ ನಮ್ಮ ಅಧಿಕಾರಿಗಳು ಮಳಿಗೆಗೆ ಭೇಟಿ ನೀಡಿ, ಅದನ್ನು ಮುಚ್ಚಿಸಿದ್ದಾರೆ. ಮಳಿಗೆಯ ಎಲ್ಲ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ’ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.