ಮಂಗಳೂರು: ಇಲ್ಲಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ‘ಅದಾನಿ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಬದಲಿಸಿದ್ದ ನಿರ್ವಹಣೆ ಗುತ್ತಿಗೆ ಕಂಪನಿ, ಇದೀಗ ಸ್ಥಳೀಯರ ಹೋರಾಟದ ಫಲವಾಗಿ ಅದನ್ನು ಹಿಂದಿನಂತೆ ಬದಲಿಸಿದೆ ಎಂದು ಸಾಮಾಜಿಕ ಹೋರಾಟಗಾರ ದಿಲ್ರಾಜ್ ಆಳ್ವ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ಬಳಿಕ ಅಲ್ಲಿನ ನಾಮಫಲಕವನ್ನು ಕಂಪನಿಯು ಬದಲಾಯಿಸಿತ್ತು ಎಂದರು.
ಆದರೆ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಅದಾನಿ ಕಂಪನಿ ನಡುವೆ ನಡೆದ ಒಡಂಬಡಿಕೆಯಲ್ಲಿ ಹೆಸರು ಬದಲಾವಣೆಗೆ ಅವಕಾಶ ಇರಲಿಲ್ಲ ಎನ್ನುವುದು ಮಾಹಿತಿ ಹಕ್ಕಿನಿಂದ ತಿಳಿದುಬಂದಿತ್ತು ಎಂದರು.
ಇದರ ಆಧಾರದಲ್ಲಿ ನಡೆಸಿದ ಕಾನೂನು ಹೋರಾಟದ ಫಲವಾಗಿ ಶುಕ್ರವಾರ ಕಂಪನಿಯು ವಿಮಾಣ ನಿಲ್ದಾಣದ ನಾಮಫಲಕದಿಂದ ಅದಾನಿ ಹೆಸರು ಕೈ ಬಿಟ್ಟು ಮೊದಲಿನಂತೆ ‘ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರು ನಾಮಫಲಕ ಅಳವಡಿಸಿದೆ. ಇದು ನಮ್ಮ ಕಾನೂನು ಹೋರಾಟಕ್ಕೆ ಸಂದ ಜಯ ಎಂದು ಹೇಳಿದರು.