ಮಂಗಳೂರು: ವಿಪತ್ತಿನ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಕಾಲಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೆ, ಕಾಂಗ್ರೆಸ್ ಮುಖಂಡರು ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ಜನಸಾಮಾನ್ಯರ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ದೂರಿದ್ದಾರೆ.
‘ಶುಕ್ರವಾರ ಜಿಲ್ಲೆಗೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಲೆಕ್ಕ ಕೇಳುವ ಭ್ರಮೆ ಹಿಡಿದಿದೆ. ಅವರ ಅಕ್ರಮ ಸಂಪತ್ತಿನ ಬಗ್ಗೆ ಸಿಬಿಐ ಲೆಕ್ಕ ಕೇಳಿತ್ತು. ಹೀಗಾಗಿ ಅವರಿಗೆ ಈಗ ನಿದ್ದೆಯಲ್ಲಿ ಹಾಗೂ ನಿದ್ದೆಯಿಂದ ಎದ್ದಾಗ ಲೆಕ್ಕದ ನೆನಪೇ ಬರುತ್ತಿದೆ’ ಎಂದು ಟೀಕಿಸಿದ್ದಾರೆ.
ಅಂದು ಸುಳ್ಯದ ಜನಸಾಮಾನ್ಯರೊಬ್ಬರು ವಿದ್ಯುತ್ ಲೆಕ್ಕ ಕೇಳಿದಾಗ, ಅಧಿಕಾರ ದುರುಪಯೋಗ ಪಡಿಸಿಕೊಂಡು ಅವರಿಗೆ ಪೊಲೀಸರ ಮೂಲಕ ಹಿಂಸೆ ಕೊಟ್ಟಿದ್ದನ್ನು ಜಿಲ್ಲೆಯ ಜನ ಇನ್ನೂ ಮರೆತಿಲ್ಲ. ಇಂತಹ ನಾಯಕರಿಂದ ಹೆಚ್ಚಿನದೇನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.