ಮೂಡುಬಿದಿರೆ: ಹನ್ನೆರಡು ದಿನಗಳ ಅಂತರದಲ್ಲಿ ಬೇರೆ ಬೇರೆ ಕಾಯಿಲೆಯಿಂದ ಒಂದೇ ಮನೆಯ ಮೂವರು ಸಾವನಪ್ಪಿರುವ ಘಟನೆ ಇಲ್ಲಿಗೆ ಸಮೀಪದ ಚಾಮುಂಡಿಬೆಟ್ಟ ಎಂಬಲ್ಲಿ ನಡೆಸಿದ್ದು, ಈ ಘಟನೆಯಿಂದ ಮನೆ ಯಜಮಾನ ಏಕಾಂಗಿಯಾಗಿದ್ದಾರೆ.
ಮನೆ ಯಜಮಾನ ದಿಲೀಪ್ ವೃತ್ತಿಯಲ್ಲಿ ಮೆಕ್ಯಾನಿಕ್ ಆಗಿದ್ದಾರೆ. ಅವರ ಪತ್ನಿ ಭಾರತಿ (42) ಅನಾರೋಗ್ಯದಿಂದ ಬಳಲಿ ಮೇ 29ರಂದು ಮೃತಪಟ್ಟಿದ್ದರು. ದಿಲೀಪ್ ಅವರ ತಾಯಿ ಸುಶೀಲಾ (80) ವಯೋ ಸಹಜ ಕಾಯಿಲೆಯಿಂದ ಜೂನ್ 2ರಂದು ನಿಧನರಾದರು.
ದಿಲೀಪ್ ಮತ್ತು ಭಾರತಿ ದಂಪತಿಯ ಏಕೈಕ ಪುತ್ರಿ ಶ್ರುತಿ (21) ಪದವಿ ವ್ಯಾಸಂಗ ಮಾಡುತ್ತಿದ್ದು, ಕೆಲ ದಿನಗಳಿಂದ ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದರು. ಮಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟರು.
ಮನೆಮಂದಿಯನ್ನು ಕಳೆದುಕೊಂಡ ದಿಲೀಪ್ ಈಗ ಏಕಾಂಗಿಯಾಗಿದ್ದಾರೆ. ಒಂದರ ಮೇಲೊಂದರಂತೆ ನಡೆದ ಮೂರು ಸಾವುಗಳು ದಿಲೀಪ್ ಅವರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.