ಮಂಗಳೂರು: ‘ಅಕ್ರಮದ ವಿರುದ್ಧ ಧ್ವನಿ ಎತ್ತುವವರನ್ನು ದೇಶದ್ರೋಹಿಗಳು ಎಂಬಂತೆ ಬಿಂಬಿಸುವ ಪ್ರಯತ್ನ ದೇಶದಲ್ಲಿ ನಡೆಯುತ್ತಿದೆ. ಇದನ್ನೆಲ್ಲಾ ನೋಡಿಕೊಂಡು ವಕೀಲರು ಸುಮ್ಮನೆ ಕೂರಬಾರದು. ಇಂತಹ ಪರಿಸ್ಥಿತಿಯಲ್ಲಿ ವಕೀಲರು ಮಹತ್ತರ ಪಾತ್ರ ನಿರ್ವಹಿಸುವ ಅಗತ್ಯವಿದೆ’ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಪದ್ಮರಾಜ್ ಹೇಳಿದರು.
ಇಲ್ಲಿ ವಕೀಲರ ಜೊತೆ ಬುಧವಾರ ಏರ್ಪಡಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.
‘ತಾವು ಅರಿತಿರುವ ನೈಜ ವಿಚಾರಗಳನ್ನು ವಕೀಲರು ಸಮಾಜಕ್ಕೆ ತಿಳಿಸಬೇಕಿದೆ. ಅಪಪ್ರಚಾರದ ಅವಶ್ಯಕತೆ ನಮಗಿಲ್ಲ. ಮಂಗಳೂರಿಗೆ ಹೈಕೋರ್ಟ್ ಪೀಠ ಬೇಕೆಂಬ ಬೇಡಿಕೆಯೂ ಗಮನದಲ್ಲಿದೆ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ‘ದೇಶದಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯುತ್ತಿದೆ ಎಂಬುದು ನಿಮಗೆ ತಿಳಿದೇ ಇದೆ. ಇವುಗಳನ್ನು ಪ್ರಶ್ನಿಸುವ ಮನೋಭಾವ ವಕೀಲರ ಸಮುದಾಯದಲ್ಲಿ ಬೆಳೆಯಬೇಕಿದೆ’ ಎಂದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಚುನಾವಣಾ ಸಮಿತಿ ಅಧ್ಯಕ್ಷ ಬಿ. ರಮಾನಾಥ ರೈ, ‘ಅನಿಸಿದ್ದನ್ನು ಮುಕ್ತವಾಗಿ ಮಾತನಾಡಲು ಭಯಪಡುವ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ’ ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಮುಖಂಡ ಬಿ.ಇಬ್ರಾಹಿಂ, ವಕೀಲರಾದ ಯಶವಂತ್ ಮರೋಳಿ, ವಕೀಲ ಹನೀಫ್, ದಿನಕರ ಶೆಟ್ಟಿ, ಮೂಸಾ ಕುಂಞಿ ಮತ್ತಿತರರು ಭಾಗವಹಿಸಿದ್ದರು.