ಉಳ್ಳಾಲ: ತಾಲ್ಲೂಕಿನ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರುವಿನಲ್ಲಿ ಮನೆ ಬಳಿ ಮೋರಿ ದಾಟುವಾಗ ಆಯತಪ್ಪಿ ಬಿದ್ದು ಮಳೆ ನೀರಿನಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ.
ಮೃತರನ್ನು ಪಿಲಾರು ಪಂಜಂದಾಯ ದೈವಸ್ಥಾನದ ಬಳಿಯ ಬಾಡಿಗೆ ಮನೆ ನಿವಾಸಿ ಸುರೇಶ್ ಗಟ್ಟಿ (52) ಎಂದು ಗುರುತಿಸಲಾಗಿದೆ. ಪೇಂಟರ್ ಆಗಿದ್ದ ಅವರು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
‘ಮೋರಿಯಲ್ಲಿ ಬಿದ್ದಿದ್ದ ಸುರೇಶ್ ಅವರನ್ನು ಪಕ್ಕದ ಮನೆಯ ಪ್ರೇಮಾನಂದ ಮತ್ತು ಸಂಬಂಧಿ ಧನರಾಜ್ ಅವರು ಮೇಲಕ್ಕೆತ್ತಿ ಆಸ್ಪತ್ರೆ ಸಾಗಿಸಿದ್ದರು. ಅಷ್ಟರಲ್ಲೇ ಅವರು ಅಸುನೀಗಿದ್ದರು.
‘ಕುಟುಂಬಕ್ಕೆ ಸುರೇಶ್ ಆಧಾರ ಸ್ತಂಭವಾಗಿದ್ದರು. ಅವರ ಪತ್ನಿ ಬೀಡಿ ಕಟ್ಟುತ್ತಾರೆ. ಅವರ ಹಿರಿಯ ಮಗಳಿಗೆ ಇತ್ತೀಚಿಗಷ್ಟೆ ಮದುವೆಯಾಗಿದೆ. ಕಿರಿಯ ಮಗಳು ಅವಿವಾಹಿತೆ’ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದರು.