‘ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ. ನಕಾರಾತ್ಮಕ ಯೋಚನೆಗಳನ್ನು ಬದಿಗೆ ತಳ್ಳಿ, ಸಕಾರಾತ್ಮಕವಾಗಿ ಯೋಚಿಸಿ. ಆಗ ನಿಮ್ಮ ಮಿದುಳು ಶಾಂತವಾಗಿ, ಹೆಚ್ಚೆಚ್ಚು ವಿಚಾರಗಳನ್ನು ಮನನ ಮಾಡಿಕೊಳ್ಳುತ್ತದೆ. ಈಗಾಗಲೇ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪೂರ್ವಭಾವಿ ಪರೀಕ್ಷೆಗಳನ್ನು ಬರೆದ ನಿಮಗೆ ಪರೀಕ್ಷೆ ಎದುರಿಸುವ ಕಲೆ ಕರಗತವಾಗಿದೆ. ಅಂತಿಮ ಪರೀಕ್ಷೆಯ ಬಗ್ಗೆ ಆತಂಕ ಬೇಡ. ಸುಲಭ ಪ್ರಶ್ನೆಗಳು ಬರುತ್ತವೆ. ಸರಳವಾಗಿ ಉತ್ತರಿಸಿ. ಸರಿಯಾದ ಉತ್ತರಗಳಿಗೆ ಮೌಲ್ಯಮಾಪಕರು ಪೂರ್ಣ ಅಂಕ ನೀಡುತ್ತಾರೆ’ ಎಂದು ಡಿಡಿಪಿಐ ವೆಂಕಟೇಶ ಎಸ್. ಪಟಗಾರ್ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.