ಪುತ್ತೂರು: ಕಳೆದ ವರ್ಷದ ಮಾರ್ಚ್ ತಿಂಗಳಿಂದ ಇಲ್ಲಿನ ತನಕ ನಗರಸಭೆಯ ಪೌರ ಕಾರ್ಮಿಕರು, ನೌಕರರು, ಹಾಗೂ ಕೋವಿಡ್ ಕಾರ್ಯಪಡೆಯ ವಿಶೇಷ ಕಾಳಜಿಯಿಂದ ನಗರಸಭೆ ವ್ಯಾಪ್ತಿಯಲ್ಲಿ ಎಲ್ಲಿಯೂ ಸೀಲ್ಡೌನ್ ಮಾಡಬೇಕಾದ ಪ್ರಮೇಯ ಬಂದಿಲ್ಲ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಪೌರಾಯುಕ್ತ ಮಧು ಎಸ್.ಎಂ ಅವರ ಸಂಪರ್ಕದ ಮೂಲಕ ಮೈಸೂರಿನ ಹೆಲ್ಪಿಂಗ್ ಎಂಡ್ ಫೌಂಡೇಷನ್ ಸಂಸ್ಥೆಯು ಪುತ್ತೂರು ನಗರಸಭೆ ಕಚೇರಿಯ 18 ಮಂದಿ ಹೊರಗುತ್ತಿಗೆ ನೌಕರರಿಗೆ ಮತ್ತು ಐವರು ಗೃಹರಕ್ಷಕ ದಳದ ಮಾರ್ಷಲ್ಗಳಿಗೆ ಆಹಾರದ ಕಿಟ್ ನೀಡಿದ್ದು, ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಕಿಟ್ ವಿತರಿಸಿ ಮಾತನಾಡಿದರು.
ನಗರಸಭೆ ಸದಸ್ಯರು, ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರ ಮೂಲಕ ಕಾರ್ಯಪಡೆಯು ಪ್ರತಿ ಮನೆಗೆ ಭೇಟಿ ಮಾಡಿ ಅಲ್ಲಿನ ಕೋವಿಡ್ ಬಾಧಿತರ ಪಟ್ಟಿಮಾಡಿ, ಅವರಿಗೆ ಮೂಲ ಸೌಕರ್ಯ ಒದಗಿಸಿದ ಕಾರಣ ನಗರಸಭೆ ವ್ಯಾಪ್ತಿಯಲ್ಲಿ ಸೀಲ್ಡೌನ್ ಆಗದಿರಲು ಅನುಕೂಲವಾಯಿತು ಎಂದರು.
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಮಾತನಾಡಿ, ‘ಲಾಕ್ಡೌನ್ ವೇಳೆ ಎಲ್ಲರೂ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ’ ಎಂದರು. ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಆಗದಂತೆ ಕಾರ್ಯ ನಿರ್ವಹಣೆ ಮಾಡಿದ ಮೆಸ್ಕಾಂ ಎಂಜಿನಿಯರ್ ರಾಮಚಂದ್ರ ಮತ್ತು ಕಿರಿಯ ಎಂಜಿನಿಯರ್ ನೊವೆಲ್ ಶರಾವೊ ಅವರನ್ನು ಸಂಜೀವ ಮಠಂದೂರು ಸನ್ಮಾನಿಸಿದರು.
ಮೆಸ್ಕಾಂ ನೌಕರರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ಗಳನ್ನು ವಿತರಿಸಲಾಯಿತು.
ಮಧು ಎಸ್.ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಶ್ವೇತಾ ಕಿರಣ್ ಇದ್ದರು.