ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಮಂಗಳೂರು: ಬರುತ್ತಿದೆ ಮುಂಗಾರು– ನಗರಗಳಲ್ಲಿ ಸಮಸ್ಯೆಗಳು ನೂರಾರು

ಚುನಾವಣೆ ನೆಪ– ಇನ್ನೂ ಶುರುವಾಗಿಲ್ಲ ಮಳೆಗಾಲಕ್ಕೆ ಪೂರ್ವತಯಾರಿ
Published : 22 ಮೇ 2023, 6:13 IST
Last Updated : 22 ಮೇ 2023, 6:13 IST
ಫಾಲೋ ಮಾಡಿ
Comments
ಪ್ರವಾಹ ನಿವಾರಣೆ– ಈ ಸಲವೂ ಮರೀಚಿಕೆ
ಮಂಗಳೂರು ನಗರದಲ್ಲಿ ‌2022ರ ಜೂನ್‌ ಮತ್ತು ಜುಲೈ ತಿಂಗಳಲ್ಲಿ ಪದೇ ಪದೇ ಪ್ರವಾಹ ಉಂಟಾಗಿತ್ತು. ಪ್ರವಾಹದಿಂದ ತತ್ತರಿಸಿದ್ದ ನಗರದ ಜನರು ಪಾಲಿಕೆಯ ಬಗ್ಗೆ ಜನಪ್ರತಿನಿಧಿಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ತೋಡಿಕೊಂಡಿದ್ದರು. ಪ್ರವಾಹದ ಚಿತ್ರಗಳನ್ನು ಹಂಚಿಕೊಂಡು ‘ಸ್ಮಾರ್ಟ್‌ ಸಿಟಿ’ ಮಂಗಳೂರಿಗೆ ಸ್ವಾಗತ ಎಂದು ಟ್ರೋಲ್‌ ಮಾಡಿದ್ದರು. ಜನರ ಆಕ್ರೋಶಕ್ಕೆ ಮಣಿದ ಜಿಲ್ಲಾಡಳಿತ ಪ್ರವಾಹ ನಿಯಂತ್ರಣಕ್ಕೆ ತಾತ್ಕಾಲಿಕ ಕಾಮಗಾರಿಗಳನ್ನು ಕೈಗೊಂಡಿತ್ತು. ನಂತರ ತಜ್ಞರ ಮೂಲಕ ಅಧ್ಯಯನ ನಡೆಸಿ ಶಾಶ್ವತ ಕಾಮಗಾರಿ ಕೈಗೊಳ್ಳುವ ಭರವಸೆಯನ್ನು ಜನಪ್ರತಿನಿಧಿಗಳು ನೀಡಿದ್ದರು. ಅವುಗಳಿನ್ನೂ ಭರವಸೆಗಳಾಗಿಯೇ ಉಳಿದಿವೆ. ನಗರದಲ್ಲಿ ಪದೇ ಪದೇ ಪ್ರವಾಹ ಉಂಟಾಗುವ ಕೊಟ್ಟಾರಚೌಕಿ ಮಾಲೆಮಾರ್‌ ಪ್ರದೇಶದಲ್ಲಿ ಅಧ್ಯಯನ ನಡೆಸಿದ್ದ ಎನ್‌ಐಟಿಕೆ ತಜ್ಞರ ತಂದ ಇಲ್ಲಿನ ರಾಜಕಾಲುವೆಗಳ ಅಗಲ ಹೆಚ್ಚಿಸಲು ಸಲಹೆ ನೀಡಿತ್ತು. ಆದರೆ ಈ ಕಾರ್ಯ ನಡೆದಿಲ್ಲ. ಅದರ ಬದಲು ರಾಜಕಾಲುವೆಗಳ ಹೂಳೆತ್ತಿ ಕೆಲವೆಡೆ ಅವುಗಳ ತಡೆಗೋಡೆಗಳನ್ನು ಎತ್ತರಿಸಿ ಪ್ರವಾಹ ನಿಯಂತ್ರಿಸಲು ಪಾಲಿಕೆ ಮುಂದಾಗಿದೆ. ‘ಪ್ರವಾಹ ತಡೆಯುವ ಸಲುವಾಗಿ ಮಾಲೆಮಾರ್‌ ಕೊಟ್ಟಾರ ಚೌಕಿ ಪ್ರದೇಶಗಳಲ್ಲಿ ರಾಜಕಾಲುವೆಗಳ ತಡೆಗೋಡೆ ಎತ್ತರಿಸಲು ಹಾಗೂ ಹೂಳೆತ್ತುವುದಕ್ಕೂ ಟೆಂಡರ್‌ ಕರೆದಿದ್ದೇವೆ. ಮಳೆಗಾಲಕ್ಕೆ ಮುನ್ನವೇ ಆ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ’ ಎಂದು ಪಾಲಿಕೆ ಆಯುಕ್ತ ಚನ್ನಬಸಪ್ಪ ಕೆ. ತಿಳಿಸಿದರು. ‘ಕೊಟ್ಟಾರ ಚೌಕಿ ಹಾಗೂ ಮಾಲೇಮಾರ್‌ ಪ್ರದೇಶಗಳಲ್ಲಿ ರಾಜಕಾಲುವೆ ಪಕ್ಕದಲ್ಲೇ ಜನರು ಮೂರು– ನಾಲ್ಕು ದಶಕಗಳ ಹಿಂದೆ ಮನೆ ನಿರ್ಮಿಸಿಕೊಂಡಿದ್ದಾರೆ. ದಾಖಲೆಗಳ ಪ್ರಕಾರ ಅವರು ಒತ್ತುವರಿ ಮಾಡಿಕೊಂಡಿಲ್ಲ. ರಾಜಕಾಲುವೆಗಳನ್ನು ವಿಸ್ತರಿಸಲು ಭೂಸ್ವಾಧೀನ ನಡೆಸಬೇಕಾಗುತ್ತದೆ. ಸದ್ಯಕ್ಕೆ ಅಷ್ಟೊಂದು ಅನುದಾನ ಪಾಲಿಕೆಯಲ್ಲಿ ಲಭ್ಯ ಇಲ್ಲ. ಸರ್ಕಾರದಿಂದ ಈ ಉದ್ದೇಶಕ್ಕೆ ವಿಶೇಷ ಅನುದಾನ ಸಿಕ್ಕಿದರೆ ಶಾಶ್ವತ ಕಾಮಗಾರಿ ಕೈಗೊಳ್ಳಬಹುದು’ ಎಂದು ಎಂಜಿನಿಯರ್‌ ಒಬ್ಬರು ಮಾಹಿತಿ ನೀಡಿದರು.
ಬಲ್ಮಠದಲ್ಲಿ ಮಳೆನೀರು ಚರಂಡಿಯೊಂದರ ಜಾಲರಿಯಲ್ಲಿ ಕಸ ಕಡ್ಡಿ ಸಿಲುಕಿ ನೀರು ಕಟ್ಟಿಕೊಂಡಿರುವುದು
ಬಲ್ಮಠದಲ್ಲಿ ಮಳೆನೀರು ಚರಂಡಿಯೊಂದರ ಜಾಲರಿಯಲ್ಲಿ ಕಸ ಕಡ್ಡಿ ಸಿಲುಕಿ ನೀರು ಕಟ್ಟಿಕೊಂಡಿರುವುದು
ನಗರದಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ರಾಜಕಾಲುವೆಗಳ ಹೂಳೆತ್ತುವ ಕಾರ್ಯ ಶೇ 70ರಷ್ಟು ಪೂರ್ಣವಾಗಿದೆ
– ಕೆ.ಚನ್ನಬಸಪ್ಪ, ಆಯುಕ್ತರು ಮಂಗಳೂರು ಮಹಾನಗರ ಪಾಲಿಕೆ
ಹೆದ್ದಾರಿಗಳಲ್ಲೂ ಇವೆ ‘ಮುಳುಗುವ’ ತಾಣಗಳು
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಮಳೆಯಾದಾಗ ನೀರು ನಿಲ್ಲುವ ತಾಣಗಳು ಅನೇಕ ಕಡೆ ಇವೆ. ಮಂಗಳೂರು– ಬೆಂಗಳೂರು ಹೆದ್ದಾರಿಯಲ್ಲಿ ಅಡ್ಯಾರ್‌ನಲ್ಲಿ ಪ್ರತಿವರ್ಷವೂ ಪ್ರವಾಹದಿಂದ ಸಮಸ್ಯೆ ಉಂಟಾಗುತ್ತಿದೆ. ಜೋರು ಮಳೆಯಾದಾಗಲೆಲ್ಲ ಪಡೀಲ್‌ ರೈಲ್ವೆ ಕೆಳಸೇತುವೆ ಬಳಿಯಂತೂ ರಸ್ತೆಯಲ್ಲಿ ನಾಲ್ಕೈದು ಅಡಿಗಳಷ್ಟು ನೀರು ನಿಂತು ತಾಸುಗಟ್ಟಲೆ ಸಂಚಾರ ದಟ್ಟಣೆ ಉಂಟಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿಲ್ಲ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರ್ನಾಡು ಕಿನ್ನಿಗೋಳಿ ಪರಿಸರದಲ್ಲಿ ಹೆದ್ದಾರಿಯಲ್ಲಿ ನೀರು ನಿಲ್ಲುತ್ತದೆ. ಅಲ್ಲಿ ಇನ್ನೂ ಚರಂಡಿಯ ಹೂಳೆತ್ತಿಲ್ಲ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೊಕ್ಕೊಟ್ಟು ಜಂಕ್ಷನ್‌ ಹಾಗೂ ಕೋಟೆಕಾರ್‌ ಬಳಿಯ ಬೈಪಾಸ್‌ನಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ. ಈ ಸಮಸ್ಯೆ ನಿವಾರಿಸಲೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಂಡಿಲ್ಲ. ಮಾಣಿ– ಮೈಸೂರು ಹೆದ್ದಾರಿ ಇಕ್ಕೆಲಗಳ ಚರಂಡಿಗಳ ಹೂಳೆತ್ತುವ ಕಾರ್ಯವೂ ಈ ಬಾರಿ ನಡೆದಿಲ್ಲ. ರಾಷ್ಟ್ರೀಯ ಹೆದ್ದಾರಿಗಳ ಇಲಾಖೆಯ ಅಧಿಕಾರಿಗಳನ್ನು ಈ ಕುರಿತು ವಿಚಾರಿಸಿದರೆ ‘ಅನುದಾನದ ಕೊರತೆ ಇದೆ’ ಎಂದು ಉತ್ತರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT