ಮಂಗಳೂರು: ಈ ಬಾರಿಯ ಮುಂಗಾರು ಮಾರುತ ಜೂನ್ 4ರಂದು ಕೇರಳವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದಾಗಿ ಒಂದೆರಡು ದಿನಗಳಲ್ಲೇ ದಕ್ಷಿಣ ಕನ್ನಡ ಜಿಲ್ಲೆಗೂ ಮುಂಗಾರು ಅಡಿ ಇಡಲಿದೆ. ಆದರೆ ಮಳೆಗಾಲದ ಸ್ವಾಗತಕ್ಕೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಇನ್ನೂ ಸನ್ನದ್ಧವಾದಂತಿಲ್ಲ.
ಕಳೆದ ಸಾಲಿನಲ್ಲಿ ಮುಂಗಾರು ಪ್ರಾರಂಭವಾಗುತ್ತಿದ್ದಂತೆಯೇ ಮಂಗಳೂರು ನಗರವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಪ್ರವಾಹಗಳಿಂದಾಗಿ ಸೃಷ್ಟಿಯಾದ ಅವಾಂತರಗಳು ಅಷ್ಟಿಷ್ಟಲ್ಲ. ಮಳೆಗಾಲಕ್ಕೆ ಮುನ್ನವೇ ಕನಿಷ್ಠ ಚರಂಡಿಗಳ ಹೂಳೆತ್ತುವ ಮೂಲಕ ಮಳೆ ನೀರು ಸರಾಗವಾಗಿ ಹರಿಯುವುದಕ್ಕೆ ಅನುವು ಮಾಡಿಕೊಡಬೇಕಾದ ನಗರ ಸ್ಥಳೀಯ ಸಂಸ್ಥೆಗಳು ಚುನಾವಣೆಯ ನೆಪ ಹೇಳಿ ಈ ಮಳೆಗಾಲದ ಪೂರ್ವತಯಾರಿಯನ್ನು ಮರೆತೇ ಬಿಟ್ಟಿವೆ.
ಮಂಗಳೂರು ನಗರದಲ್ಲಿ ಮಳೆ ನೀರು ಹರಿಯುವ ಚರಂಡಿ ಹಾಗೂ ರಾಜಕಾಲುವೆಗಳ ಹೂಳೆತ್ತುವ ಕಾರ್ಯವನ್ನು ಮಹಾನಗರ ಪಾಲಿಕೆ ಇತ್ತೀಚೆಗಷ್ಟೇ ಆರಂಭಿಸಿದೆ. ರಾಜಕಾಲುವೆಗಳ ಹೂಳೆತ್ತುವ ಕೆಲಸ ಅಲ್ಲಲ್ಲಿ ನಡೆಯುತ್ತಿದೆ. ಆದರೆ, ರಸ್ತೆ ಪಕ್ಕದ ಮಳೆನೀರು ಚರಂಡಿಗಳನ್ನು ದುರಸ್ತಿ ಪಡಿಸುವ ಕೆಲಸ ಬಹುತೇಕ ಕಡೆ ಆಮೆಗತಿಯಲ್ಲಿ ನಡೆಯುತ್ತಿದೆ. ಕೆಲವೆಡೆ ಚರಂಡಿಯಲ್ಲಿ ತುಂಬಿದ್ದ ಹೂಳನ್ನು ಮೇಲಕ್ಕೆತ್ತಿ ಅದರ ಪಕ್ಕದಲ್ಲೇ ರಾಶಿ ಹಾಕಲಾಗಿದೆ. ವಾರದ ಹಿಂದೆ ಸುರಿದ ಮಳೆಗೆ ಆ ಹೂಳು ಮತ್ತೆ ಚರಂಡಿಪಾಲಾಗಿದೆ.
ಮೊದಲ ಮಳೆಯಾದಾಗ ನಗರದಲ್ಲಿ ಅನೇಕ ಕಡೆ ಚರಂಡಿ ಕಟ್ಟಿಕೊಂಡು ನೀರು ರಸ್ತೆಯಲ್ಲೇ ಹರಿದಿತ್ತು. ಮಳೆಯ ನೀರಿನ ಜೊತೆ ಕಸಕಡ್ಡಿಗಳು ಹರಿದುಬಂದು ಚರಂಡಿಗಳ ಮೋರಿಗಳ ಬಳಿ ಕಟ್ಟಿಕೊಂಡಿದ್ದು, ಅವುಗಳನ್ನು ತೆರವುಗೊಳಿಸುವ ಕಾರ್ಯವೂ ಆಗಿಲ್ಲ.
‘ರಾಜಕಾಲುವೆಗಳ ಹೂಳೆತ್ತುವ ಕಾರ್ಯ ಆರಂಭಿಸಿದ್ದೇವೆ. ಎರಡು ಮೂರು ವಾರ್ಡ್ಗಳನ್ನು ಸೇರಿ ಪ್ಯಾಕೇಜ್ ರೂಪಿಸಿ ಹೂಳೆತ್ತುವ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಕೆಲವೆಡೆ ಹೂಳೆತ್ತುವ ಕೆಲಸ ಮುಗಿದಿದೆ’ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಚನ್ನಬಸಪ್ಪ ಕೆ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಸುರತ್ಕಲ್ ವ್ಯಾಪ್ತಿಯಲ್ಲಿ ಏಳು ಪ್ಯಾಕೇಜ್ಗಳಲ್ಲಿ ಮಳೆನೀರು ಚರಂಡಿ ದುರಸ್ತಿ ಕಾಮಗಾರಿ ಕೈಗೊಂಡಿದ್ದೇವೆ. 3 ಮೀಟರ್ಗಿಂತ ಅಗಲವಾಗಿರುವ ಎಲ್ಲ ರಾಜಕಾಲುವೆಗಳ ಹೂಳೆತ್ತಿದ್ದೇವೆ’ ಎಂದು ಎಂಜಿನಿಯರ್ ಒಬ್ಬರು ಮಾಹಿತಿ ನೀಡಿದರು.
ಇದು ಜಿಲ್ಲಾಕೇಂದ್ರದ ಪರಿಸ್ಥಿತಿಯಾದರೆ, ಜಿಲ್ಲೆಯ ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಜಿಲ್ಲೆಯ ನಗರ ಹಾಗೂ ಪಟ್ಟಣಗಳಲ್ಲಿ ಮಳೆನೀರು ಹರಿಯುವ ಚರಂಡಿಗಳ ಹೂಳೆತ್ತುವ ಕಾರ್ಯ ಇನ್ನೂ ಶುರುವೇ ಆಗಿಲ್ಲ.
ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಚರಂಡಿಗಳ ಹೂಳೆತ್ತುವ ಕಾರ್ಯ ಇನ್ನೂ ಆರಂಭವಾಗಿಲ್ಲ. ಇತ್ತೀಚೆಗೆ ಸುರಿದ ಮಳೆಗೆ ಅನೇಕ ಕಡೆ ರಸ್ತೆಯಲ್ಲೇ ನೀರು ಹರಿದು ಸಮಸ್ಯೆ ಉಂಟಾಗಿತ್ತು. ಕೋಟೆಕಾರು ಪಟ್ಟಣ ಪಂಚಾಯಿತಿ, ಸೋಮೇಶ್ವರ ಪುರಸಭೆಯ ವ್ಯಾಪ್ತಿಯಲ್ಲೂ ಇದೇ ಸ್ಥಿತಿ ಇದೆ. ಸೋಮೇಶ್ವರ ನಗರದ ಸಭೆಯಲ್ಲಿ ಹೊಸ ರಸ್ತೆಗಳು ನಿರ್ಮಿಸಿದ ಕಡೆ ಮಳೆನೀರು ಚರಂಡಿ ನಿರ್ಮಿಸಿಲ್ಲ. ಹಾಗಾಗಿ ಮಳೆಗಾಲದಲ್ಲಿ ಇಲ್ಲಿ ಸಮಸ್ಯೆ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸ್ಥಳೀಯರು.
ಪುತ್ತೂರು ನಗರಸಭೆಯ ವ್ಯಾಪ್ತಿಯಲ್ಲೂ ಮಳೆ ನೀರು ಚರಂಡಿಗಳ ಹೂಳೆತ್ತಿಲ್ಲ. ನಗರದ ರಸ್ತೆಗಳು ಮೊದಲೇ ಕಿರಿದಾಗಿವೆ. ಮಳೆಗಾಲಕ್ಕೆ ಮುನ್ನವೇ ಚರಂಡಿಗಳ ಹೂಳೆತ್ತದಿದ್ದರೆ ನೀರು ಹರಿವಿಗೆ ಸಮಸ್ಯೆ ಉಂಟಾಗಲಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದರು.
ಮೂಡುಬಿದಿರೆ ಪುರಸಭೆ ವ್ಯಾಪ್ತಿಯಲ್ಲೂ ಎಲ್ಲೂಚರಂಡಿಗಳ ಹೂಳೆತ್ತುವ ಕೆಲಸ ನಡೆದಿಲ್ಲ. ರೋಟರಿ ಶಾಲೆ, ಹಾಗೂ ಬಸ್ ನಿಲ್ದಾಣದ ಬಳಿ ಚರಂಡಿ ಕಟ್ಟಿಕೊಂಡು ರಸ್ತೆಯಲ್ಲೇ ನೀರು ನಿಲ್ಲುತ್ತದೆ ಎನ್ನುತ್ತಾರೆ ಸ್ಥಳೀಯರು.
ಸುಳ್ಯಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೂ ಚರಂಡಿ ಹೂಳೆತ್ತಿಲ್ಲ. ಇಲ್ಲಿನ ಹಳೆಗೇಟು ಹಾಗೂ ಜಟ್ಟಿಪಳ್ಳದ ಬಳಿ ಚರಂಡಿ ಕಟ್ಟಿಕೊಂಡು ಪ್ರತಿ ಮಳೆಗಾಲದ ಆರಂಭದಲ್ಲೂ ಸಮಸ್ಯೆ ಸೃಷ್ಟಿಯಾಗುತ್ತದೆ. ಇಂತಹ ಪ್ರದೇಶದಲ್ಲೂ ಚರಂಡಿಯ ಹೂಳೆತ್ತುವ ಕಾರ್ಯ ನಡೆದಿಲ್ಲ.
ಬೆಳ್ತಂಗಡಿ, ಮೂಲ್ಕಿ ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲೂ ಚರಂಡಿಯ ಹೂಳೆತ್ತಿಲ್ಲ.
ನಗರದಲ್ಲಿ ಮಳೆಗಾಲದಲ್ಲಿ ಪ್ರವಾಹ ಉಂಟಾಗದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ರಾಜಕಾಲುವೆಗಳ ಹೂಳೆತ್ತುವ ಕಾರ್ಯ ಶೇ 70ರಷ್ಟು ಪೂರ್ಣವಾಗಿದೆ– ಕೆ.ಚನ್ನಬಸಪ್ಪ, ಆಯುಕ್ತರು ಮಂಗಳೂರು ಮಹಾನಗರ ಪಾಲಿಕೆ
ಪೂರಕ ಮಾಹಿತಿ: ಶಶಿಧರ್ ರೈ ಕುತ್ಯಾಳ, ಮೋಹನ್ ಕುತ್ತಾರ್, ಪ್ರಸನ್ನ ಹೆಗ್ಡೆ, ಲೋಕೇಶ್ ಪೆರ್ಲಂಪಾಡಿ, ಗಣೇಶ್ ಬಿ. ಶಿರ್ಲಾಲು, ಮೋಹನ್ ಶ್ರೀಯಾನ್ ರಾಯಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.