ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ 56ನೇ ಮಂಗಳಾದೇವಿ ವಾರ್ಡಿನಲ್ಲಿ ಮಂಗಳಾದೇವಿ ಬಸ್ ಟರ್ಮಿನಲ್, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯ ಚಿಕಿತ್ಸಾಲಯ ಮತ್ತು ನಗರ ಪಾಲಿಕೆ ಸಿಬ್ಬಂದಿಗೆ ನೂತನ ವಸತಿ ಸಮುಚ್ಚಯ ನಿರ್ಮಾಣ ಸೇರಿ ಒಟ್ಟು ₹ 6.98 ಕೋಟಿ ವೆಚ್ಚದ ಉದ್ದೇಶಿತ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಬುಧವಾರ ಭೂಮಿಪೂಜೆ ನೆರವೇರಿಸಿದರು.
ಮಂಗಳಾದೇವಿ ದೇವಸ್ಥಾನದ ಮುಖ್ಯರಸ್ತೆ ಬದಿಯಲ್ಲಿ ಬಸ್ಗಳು ನಿಲ್ಲುವುದರಿಂದ ಓಡಾಡುವ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ನಗರಪಾಲಿಕೆ ಸಿಬ್ಬಂದಿ ವಸತಿಗೃಹ ಹಳೆಯದಾಗಿದ್ದು, ವಾಸಿಸಲು ಕಷ್ಟವಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶು ವೈದ್ಯ ಚಿಕಿತ್ಸಾಲಯಗಳ ಕಟ್ಟಡಗಳು ಮಳೆಗಾಲದಲ್ಲಿ ಸೋರುತ್ತವೆ. ಈ ಕಾರಣಕ್ಕೆ ಇವುಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಕಾಮತ್ ಹೇಳಿದರು.
ಮೇಯರ್ ಪ್ರೇಮಾನಂದ ಶೆಟ್ಟಿ, ಮಹಾನಗರ ಪಾಲಿಕೆ ಸದಸ್ಯ ದಿವಾಕರ್, ಮುಖಂಡರಾದ ರವಿಶಂಕರ್ ಮೀಜಾರು, ನಿತಿನ್ ಕುಮಾರ್, ಸ್ಮಾರ್ಟ್ ಸಿಟಿ ಅಧಿಕಾರಿಗಳು, ಇದ್ದರು.