ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ಸುರಂಗ, 6 ಸೇತುವೆ ನಿರ್ಮಾಣ

ಶಿರಾಡಿ ಸುರಂಗ: ಡಿಸೆಂಬರ್‌ ಅಂತ್ಯಕ್ಕೆ ಭೂಸ್ವಾಧೀನ ಪ್ರಕ್ರಿಯೆ
Last Updated 1 ಡಿಸೆಂಬರ್ 2020, 23:12 IST
ಅಕ್ಷರ ಗಾತ್ರ

ಮಂಗಳೂರು: ಈ ಭಾಗದ ಬಹುದಿನಗಳ ಬೇಡಿಕೆಯಾದ ಮಂಗಳೂರು–ಬೆಂಗಳೂರು ಶಿರಾಡಿ ಸುರಂಗ ಮಾರ್ಗಕ್ಕೆ ಇದೀಗ ಮತ್ತೆ ಚಾಲನೆ ದೊರೆಯುವ ಲಕ್ಷಣಗಳು ಗೋಚರಿಸುತ್ತಿವೆ. ಭಾರತ ಮಾಲಾ ಯೋಜನೆಯಡಿ ಈ ಮಾರ್ಗದ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದು, ಭೂಸ್ವಾಧೀನ ಪ್ರಕ್ರಿಯೆ ಡಿಸೆಂಬರ್‌ ಅಂತ್ಯದಲ್ಲಿ ಆರಂಭವಾಗುವ ಸಾಧ್ಯತೆ ಇದೆ.

ಈ ಯೋಜನೆಯ ಬಹುತೇಕ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಭೂಸ್ವಾಧೀನದ ಅಧಿಸೂಚನೆಗೆ ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಯುತ್ತಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯಲ್ಲಿ ಅಡ್ಡಹೊಳೆಯಿಂದ ಸಕಲೇಶಪುರದ ಹೆಗ್ಗದ್ದೆವರೆಗಿನ 23.57 ಕಿ.ಮೀ. ಸುರಂಗ ಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಈಗಾಗಲೇ ಆಗಿರುವ ಯೋಜನಾ ವರದಿಯಲ್ಲಿ ಅಲ್ಪ ಮಾರ್ಪಾಡು ಮಾಡಲಾಗುತ್ತಿದ್ದು, 10 ಸೇತುವೆಗಳ ಬದಲು ಏಳು ಸೇತುವೆ ಹಾಗೂ 6 ಸುರಂಗ ಮಾರ್ಗದೊಂದಿಗೆ ಈ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಬಗ್ಗೆ ವಿಸ್ತೃತ ಯೋಜನಾ ವರದಿ ಸಿದ್ಧವಾಗುತ್ತಿದೆ.

ಅಡ್ಡಹೊಳೆ, ಗುಂಡ್ಯ, ಎಡಕುಮೇರಿ, ಕಡಗರವಳ್ಳಿ, ಮಾರನಹಳ್ಳಿ ಮೂಲಕ ಸಾಗುವ ಈ ಮಾರ್ಗದಲ್ಲಿ 6 ಸುರಂಗ ಮತ್ತು 10 ಸೇತುವೆಗಳು ನಿರ್ಮಾಣಕ್ಕೆ ಏಳು ವರ್ಷಗಳ ಹಿಂದೆ ಯೋಜನಾ ವರದಿ ತಯಾರಿಸಲಾಗಿತ್ತು. ಜಪಾನ್‌ ಇಂಟರ್‌ನ್ಯಾಶನಲ್‌ ಕೋ-ಆಪರೇಟಿವ್‌ ಏಜೆನ್ಸಿ (ಜೈಕಾ) ಸುಮಾರು ₹10,015 ಕೋಟಿ ವೆಚ್ಚದ ಯೋಜನಾ ವರದಿಯನ್ನು ಸಿದ್ಧಪಡಿಸಿತ್ತು.

ಇದೀಗ ಈ ಕಾಮಗಾರಿಯ ವೆಚ್ಚ ₹12ಸಾವಿರ ಕೋಟಿ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಹಿಂದೆ ಜೈಕಾ ಸಹಯೋಗದೊಂದಿಗೆ ಹೆದ್ದಾರಿ ಇಲಾಖೆ ಈ ಕಾಮಗಾರಿ ಕೈಗೊಳ್ಳಲು ನಿರ್ಧರಿಸಿತ್ತು. ಇದೀಗ ಆ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದ್ದು, ಭಾರತಮಾಲಾ ಯೋಜನೆಯಡಿ ಕೈಗೊಳ್ಳಲು ನಿರ್ಧರಿಸಿದೆ.

ರಫ್ತಿಗೆ ಅನುಕೂಲ: ಮಂಗಳೂರಿನಲ್ಲಿ ಸುಸಜ್ಜಿತವಾದ ಬಂದರು ಇದೆ. ಆದರೆ, ಶಿರಾಡಿ ಘಾಟಿಯಲ್ಲಿ ಸಂಚಾರ ಸಮಸ್ಯೆಯಿಂದಾಗಿ ಬೆಂಗಳೂರಿನ ಬಹುತೇಕ ಉದ್ಯಮಗಳು ಚೆನ್ನೈ ಬಂದರಿನ ಮೂಲಕವೇ ರಫ್ತು ಮಾಡುತ್ತಿವೆ.

ಒಡಿಶಾ ಕೂಡ ಚೆನ್ನೈ ಬಂದರನ್ನೇ ಅವಲಂಬಿಸಿರುವುದರಿಂದ ಅಲ್ಲಿಯೂ ಹೆಚ್ಚಿನ ಒತ್ತಡವಿದೆ. ಹೀಗಾಗಿ ಮಂಗಳೂರು- ಬೆಂಗಳೂರು ಮಧ್ಯೆ ಸುಗಮ ಸಂಚಾರಕ್ಕಾಗಿ ಸುರಂಗಮಾರ್ಗ ಯೋಜನೆಯನ್ನು ತ್ವರಿತಗತಿಯಲ್ಲಿ ಕೈಗೆತ್ತಿಗೊಳ್ಳಬೇಕು ಎಂಬ ಒತ್ತಡ ಕೈಗಾರಿಕಾ ವಲಯದಿಂದ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT