ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕಳ್ಳಿಗೆ ಗ್ರಾಮದ ಸಗಟು ಗೋದಾಮಿನಲ್ಲಿ ಪಡಿತರ ವಿತರಣೆಗೆ ದಾಸ್ತಾನು ಮಾಡಿದ್ದ ಅಕ್ಕಿಯಲ್ಲಿ ವ್ಯತ್ಯಾಸ ಕಂಡು ಬಂದಿರುವ ಬಗ್ಗೆ ಕರ್ನಾಟಕ ಆಹಾರ ಮತ್ತು ಸರಬರಾಜು ನಿಗಮದ ಕಚೇರಿ ವ್ಯವಸ್ಥಾಪಕ ಶರತ್ಕುಮಾರ್ ಅವರು ಬಂಟ್ವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಭೌತಿಕ ದಾಸ್ತಾನಿಗಿಂತ ಅಂದಾಜು ₹1.32 ಕೋಟಿ ಮೌಲ್ಯದ 3,892 ಕ್ವಿಂಟಲ್ ಅಕ್ಕಿ ಕೊರತೆ ಕಂಡು ಬಂದಿದೆ.
ಇದೇ ಗೋದಾಮಿನಿಂದ ಬಂಟ್ವಾಳ ನಗರಕ್ಕೆ ಪಡಿತರ ಅಕ್ಕಿ ಸರಬರಾಜು ಆಗುತ್ತದೆ. ಪಡಿತರ ವಿತರಣೆ ವಿಳಂಬ ಆಗುತ್ತಿರುವ ಬಗ್ಗೆ ಅನುಮಾನಗೊಂಡು, ಜಿಲ್ಲಾ ವ್ಯವಸ್ಥಾಪಕರ ಮೌಖಿಕ ಆದೇಶದ ಮೇಲೆ ಗುರುವಾರ ಪರಿಶೀಲನೆ ನಡೆಸಿದಾಗ ಈ ವಿಷಯ ಗಮನಕ್ಕೆ ಬಂದಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.