ಪುತ್ತೂರು: ನಗರದ ಹೊರವಲಯದ ಬೊಳುವಾರು ವಸತಿ ಸಮುಚ್ಚಾಯವೊಂದರ ಬಿ ಬ್ಲಾಕ್ ಮಹಡಿಯಿಂದ ಬಿದ್ದು ಗಂಭೀರ ಗಾಯಗೊಂಡು ಬಾಲಕ ಮೃತಪಟ್ಟಿದ್ದಾನೆ.
ಬೊಳುವಾರು ದುರ್ಗಾಪರಮೇಶ್ವರಿ ಮಲರಾಯ ಸಪರಿವಾರ ಕ್ಷೇತ್ರದ ವಿಶ್ವಸ್ಥ ಮಂಡಳಿ ಅಧ್ಯಕ್ಷ, ಸ್ಥಳೀಯ ನಿವಾಸಿ ಮನೋಹರ ರೈ ಅವರ ಪುತ್ರ, ಸುದಾನ ವಸತಿಯುತ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಸುಶಾನ್ ರೈ (15) ಮೃತ ಬಾಲಕ.
ಸುಶಾನ್ ರೈ ಶಾಲೆಯಿಂದ ಮನೆಗೆ ಹೋಗದೆ ಬೊಳುವಾರು ವಸತಿ ಸಮುಚ್ಚಾಯಕ್ಕೆ ತೆರಳಿದ್ದ. ಸಮುಚ್ಚಾಯದ ಕೆಳಗೆ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಆತ ಪತ್ತೆಯಾಗಿದ್ದ. ತಕ್ಷಣಪುತ್ತೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ಆತನಿಗೆ ತಂದೆ, ತಾಯಿ ಸುಧಾ ಎಂ. ರೈ ಮತ್ತು ಸಹೋದರ ಸೋಹನ್ ರೈ ಇದ್ದಾರೆ.
ಕಟ್ಟಡದಲ್ಲಿ ಶಾಲಾ ಬ್ಯಾಗ್ ಪತ್ತೆ: ಸುಶಾನ್ ರೈ ಶಾಲೆಯಿಂದ ಮನೆಗೆ ಹೋಗದೆ ವಸತಿ ಸಮುಚ್ಚಾಯಕ್ಕೆ ಸಂಜೆ 4.20ಕ್ಕೆ ಬಂದಿರುವುದು ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಕೆಲವೇ ನಿಮಿಷದಲ್ಲಿ ಆತ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಆದರೆ, ಆತನ ಶಾಲಾ ಬ್ಯಾಗ್ 5ನೇ ಮಹಡಿಯಲ್ಲಿ ಪತ್ತೆಯಾಗಿದೆ.