ಸುರತ್ಕಲ್: ಒಂದೇ ಕುಟುಂಬದ ಯುವತಿಯರಿಬ್ಬರು ಸಮುದ್ರಪಾಲು

ಸುರತ್ಕಲ್: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎನ್ಐಟಿಕೆ ಬೀಚ್ನಲ್ಲಿ ಒಂದೇ ಕುಟುಂಬದ ಇಬ್ಬರು ಯುವತಿಯರು ಸಮುದ್ರಪಾಲಾಗಿ ಮೃತಪಟ್ಟಿದ್ದಾರೆ.
ಮಂಗಳೂರು ಶಕ್ತಿನಗರ ನಿವಾಸಿ ವೈಷ್ಣವಿ (21) ಹಾಗೂ ತ್ರಿಶಾ (17) ಮೃತರು. ವೈಷ್ಣವಿ ಅವರ ತಂದೆ ವೆಂಕಟೇಶ್ ಎಂಬುವರನ್ನು ರಕ್ಷಣೆ ಮಾಡಲಾಗಿದೆ. ಮೃತರು ಅಣ್ಣತಮ್ಮಂದಿರ ಮಕ್ಕಳು.
ವೆಂಕಟೇಶ್ ಅವರ ಮಾವ ಈಚೆಗೆ ನಿಧನರಾಗಿದ್ದು, ತಿಥಿಯ ಪಿಂಡ ಪ್ರದಾನ ಮಾಡಲೆಂದು ಕುಟುಂಬಿಕರು ಎನ್ಐಟಿಕೆ ಸಮುದ್ರ ಕಿನಾರೆಗೆ ಬಂದಿದ್ದರು. ಪಿಂಡ ಪ್ರದಾನ ಮಾಡಿದ ಬಳಿಕ ವೆಂಕಟೇಶ್, ಅವರ ಪುತ್ರಿ ವೈಷ್ಣವಿ ಹಾಗೂ ತಮ್ಮನ ಪುತ್ರಿ ತ್ರಿಶಾ ಸಮುದ್ರಕ್ಕೆ ಇಳಿದಿದ್ದಾರೆ. ಈ ಸಂದರ್ಭ ಬಂದ ಬೃಹತ್ ಅಲೆಗೆ ಸಿಲುಕಿ ಮೂವರು ಸಮುದ್ರಪಾಲಾದರು.
ಸಮೀಪದಲ್ಲಿದ್ದ ಹೋಮ್ ಗಾರ್ಡ್ ಪ್ರಶಾಂತ್ ಮತ್ತು ಸ್ಥಳೀಯ ಯುವಕರು ಧಾವಿಸಿ, ಸಮುದ್ರಪಾಲಾದವರನ್ನು ದಡಕ್ಕೆ ಕರೆ ತಂದಿದ್ದಾರೆ. ಆದರೆ, ತ್ರಿಶಾ ಹಾಗೂ ವೈಷ್ಣವಿ ಮೃತಪಟ್ಟಿದ್ದಾರೆ. ವೆಂಕಟೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೈಷ್ಣವಿಯು ನಗರದ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರೆ, ತ್ರಿಶಾ ಬೆಂಗಳೂರಿನ ಗುರುಕುಲ ಹೈಸ್ಕೂಲ್ನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.