ಬದಿಯಡ್ಕ: ಮುಳ್ಳೇರಿಯ ಸಮೀಪದ ಕುಂಟಾರಿನಲ್ಲಿ ಪಯಸ್ವಿನಿ ಹೊಳೆಗೆ ನಿರ್ಮಿಸಿದ ತೂಗುಸೇತುವೆಯ ಹಲಗೆ ಶಿಥಿಲಗೊಂಡಿದ್ದು, ರಂದ್ರಗಳು ಉಂಟಾಗಿವೆ.
ಕಾರಡ್ಕ ಹಾಗೂ ದೇಲಂಪಾಡಿ ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸುವ ಕುಂಟಾರು ತೂಗುಸೇತುವೆ ಪ್ರದೇಶದಲ್ಲಿ ಕಾಂಕ್ರೀಟ್ ಸೇತುವೆ ನಿರ್ಮಾಣವಾಗಬೇಕೆಂಬ ಬೇಡಿಕೆ ಈಡೇರಿಲ್ಲ. 2007ರಲ್ಲಿ ಸುಮಾರು ₹ 11 ಲಕ್ಷ ವೆಚ್ಚದಲ್ಲಿ ಈ ತೂಗುಸೇತುವೆ ನಿರ್ಮಿಸಲಾಗಿತ್ತು.
ದೇಲಂಪಾಡಿ ಗ್ರಾಮ ಪಂಚಾಯಿತಿಯ ಚರ್ಲಕಾಯಿ, ಮಣಿಯೂರು, ಮೊಗೆರು, ಮಾಟೆಬಯಲು ಪ್ರದೇಶಗಳಿಂದ ಪ್ರತಿ ದಿನ ಶಾಲೆ ಮಕ್ಕಳು ಹಾಗೂ ಸಾರ್ವಜನಿಕರು ಈ ಸೇತುವೆ ಮೇಲೆಯೇ ಸಾಗಬೇಕು. ಈ ಪ್ರದೇಶದಲ್ಲಿ ಶಾಶ್ವತವಾದ ಕಾಂಕ್ರೀಟ್ ಸೇತುವೆ ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.