ಉಜಿರೆ: ಮಲವಂತಿಗೆ ಗ್ರಾಮದ ಬಂಗಾರ ಪಲ್ಕೆ ಜಲಪಾತದಲ್ಲಿ ಜನವರಿ 25 ರಂದು ಗುಡ್ಡ ಕುಸಿತದಿಂದ ಕಣ್ಮರೆಯಾಗಿದ್ದ ಕಾಶಿಬೆಟ್ಟು ನಿವಾಸಿ ಸನತ್ ಶೆಟ್ಟಿ(20) ಮೃತದೇಹ ಮಂಗಳವಾರ ಸಂಜೆ ಪತ್ತೆಯಾಗಿದೆ.
ಕಾಶಿಬೆಟ್ಟು ವಾಸುದೇವ ಶೆಟ್ಟಿ ಪುತ್ರ ಸನತ್ ಶೆಟ್ಟಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಬಿ.ಎ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದ. ಆತನ ಮೃತದೇಹ ಮಣ್ಣು ಮತ್ತು ಬಂಡೆಕಲ್ಲಿನಡಿ ಸಿಲುಕಿದ್ದರಿಂದ 22 ದಿನಗಳ ಸತತ ಕಾರ್ಯಾಚರಣೆ ಬಳಿಕ ಮಂಗಳವಾರ ಮೃತದೇಹ ಪತ್ತೆಯಾಗಿದೆ.
ಬಂಡೆ ಕಲ್ಲು ಒಡೆದು, ಜೆಸಿಬಿ ಮತ್ತು ಹಿಟಾಚಿ ಬಳಸಿ 22 ದಿನಗಳಲ್ಲಿ ಸುಮಾರು 30 ಅಡಿ ಆಳದ ಮಣ್ಣು ಮತ್ತು ಕಲ್ಲು ತೆರವುಗೊಳಿಸಲಾಗಿದೆ.
ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಕೆ.ವಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ ಸ್ಥಳಕ್ಕೆ ಭೇಟಿ ನೀಡಿದ್ದರು.
ಜಿಲ್ಲಾಡಳಿತ, ಶಾಸಕರು, ಅಗ್ನಿಶಾಮಕ ದಳ, ಕಂದಾಯ ಇಲಾಖೆ, ಎನ್.ಡಿ.ಆರ್.ಎಫ್. ತಂಡ, ಪೊಲೀಸ್ ಇಲಾಖೆ, ಸ್ಥಳೀಯ ಸೇವಾ ಕಾರ್ಯಕರ್ತರು ಸಹಕರಿಸಿದ್ದರು. ಒಂದೆರಡು ಸಲ ವಾಸನೆ ಬಂದಿತ್ತಾದರೂ ದೇಹ ಪತ್ತೆಯಾಗಿರಲಿಲ್ಲ.