ಮಂಗಳೂರು: ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆ ‘ನವಸಹಜ ಸಮುದಾಯ’ದ 7ನೇ ವಾರ್ಷಿಕ ಮಹಾಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ‘ನವಸಹಜ ಮಿಸ್ ಟ್ರಾನ್ಸ್ ತುಳುನಾಡು’ ಇದೇ 9ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.
‘ಅಂದು ಬೆಳಿಗ್ಗೆ 9.30ಕ್ಕೆ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಕಾರ್ಯಕ್ರಮ ಉದ್ಘಾಟಿಸಲಿರುವರು ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷ ಪ್ರವೀಣ್ ನಿಖಿಲ್ ತಿಳಿಸಿದರು.
‘ಸುಮಾರು 1,672 ಲಿಂಗತ್ವ ಅಲ್ಪಸಂಖ್ಯಾತರು ಜಿಲ್ಲೆಯಲ್ಲಿದ್ದು, ಸಂಘಟನೆಯು 250 ಮಂದಿ ಸದಸ್ಯರನ್ನು ಹೊಂದಿದೆ. ಸಮುದಾಯಕ್ಕೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಒದಗಿಸುವುದು ಹಾಗೂ ಸದಸ್ಯರಿಗೆ ಎದುರಾಗುವ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಯತ್ನಿಸುತ್ತಿದೆ’ ಎಂದರು.
‘ಲಿಂಗತ್ವ ಅಲ್ಪಸಂಖ್ಯಾತರಲ್ಲಿಯೂ ಸಾಕಷ್ಟು ವಿಧಗಳಿದ್ದು, ಹಲವು ಮಂದಿ ಹಲವು ಕಾರಣಗಳಿಂದ ಇನ್ನೂ ಸಮಾಜದ ಮುಖ್ಯವಾಹಿನಿಗೆ ಬರುವಲ್ಲಿ ಹಿಂದೇಟು ಹಾಕಿ ತೆರೆಮರೆಯಲ್ಲೇ ಉಳಿದುಕೊಂಡಿದ್ದಾರೆ. ಸಮಾಜವೂ ಈ ಲಿಂಗತ್ವ ಅಲ್ಪಸಂಖ್ಯಾತರನ್ನು ತಾರತಮ್ಯದ ದೃಷ್ಟಿಯಿಂದ ನೋಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸಾಕಷ್ಟು ಮಂದಿಗೆ ಇನ್ನೂ ಲಿಂಗತ್ವ ಅಲ್ಪಸಂಖ್ಯಾತ ಗುರುತಿನ ಚೀಟಿ ಲಭ್ಯವಾಗಿಲ್ಲ. ಈಬಗ್ಗೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಅವರು ಸಲಹಾ ಸಮಿತಿ ರಚಿಸಿ ತಹಶೀಲ್ದಾರ್ ಮೂಲಕ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ’ ಎಂದು ಸಂಘಟನೆಯ ಸದಸ್ಯ ಸಂತೋಷ್ ತಿಳಿಸಿದರು.