ಉಳ್ಳಾಲ (ದಕ್ಷಿಣ ಕನ್ನಡ): ಇಲ್ಲಿನ ನಗರಸಭೆಯಲ್ಲಿ 2023-24 ನೇ ಸಾಲಿನ ಬಜೆಟ್ ಮಂಡನೆ ಸಂದರ್ಭದಲ್ಲಿ ಬಜೆಟ್ ಅನ್ನು ವಿರೋಧಿಸಿ ಜೆಡಿಎಸ್ ಸದಸ್ಯರು ಕಿವಿಗೆ ಹೂವಿಟ್ಟು ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ಅಣಕಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್ ಮಂಡನೆ ಮಾಡುವಾಗ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹಾಗೂ ಕಾಂಗ್ರೆಸ್ ಶಾಸಕರು ಸದನದಲ್ಲಿ ಕಿವಿಗೆ ಹೂ ಇಟ್ಟು ಬಿಜೆಪಿ ಸರ್ಕಾರವನ್ನ ಅಣಕಿಸಿ ಗಮನ ಸೆಳೆದಿದ್ದರು. ಕಾಂಗ್ರೆಸ್ ಬಳಸಿದ ಇದೇ ಅಸ್ತ್ರವನ್ನೇ ಉಳ್ಳಾಲ ನಗರ ಸಭೆಯ ಜೆಡಿಎಸ್ ಸದಸ್ಯರು ಬಳಸಿದರು. ಆರಂಭದಲ್ಲಿ ಚೆನ್ನಾಗಿಯೇ ನಡೆದ ಸಭೆ ಕೊನೆಗೆ ಗದ್ದಲದಲ್ಲಿ ಅಂತ್ಯವಾಯಿತು.
ಬಜೆಟ್ ಮಂಡನೆ ವೇಳೆ ಜೆಡಿಎಸ್ ನ ಸದಸ್ಯರಾದ ದಿನಕರ ಉಳ್ಳಾಲ್, ಅಬ್ದುಲ್ ಬಶೀರ್ , ಖಲೀಲ್, ಜಬ್ಬಾರ್, ಮುಷ್ತಾಕ್ ಪಟ್ಲ ಅವರು ಕಿವಿಗೆ ಹೂವಿಟ್ಟು ಬಜೆಟ್ ಗೆ ತೀವ್ರ ವಿರೋಧ ವ್ಯಕ್ತ ಪಡಿಸಿದರು.
ಈ ವೇಳೆ ಬಿಜೆಪಿ ನಾಮ ನಿರ್ದೇಶಿತ ಸದಸ್ಯ ಬಾಬು ಬಂಗೇರ ಮಾತನಾಡಿ, ‘ಕಾಂಗ್ರೆಸ್ ಬಜೆಟ್ಗೆ ಬೆಂಬಲ ಸೂಚಿಸಿದರೆ, ಜೆಡಿಎಸ್ನವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ನಾವು ಬಜೆಟ್ ವಿಚಾರದಲ್ಲಿ ತಟಸ್ಥ’ ಎಂದಾಕ್ಷಣ ಸಭೆಯ ವೇದಿಕೆಯಲ್ಲಿದ್ದ ನಗರಸಭೆ ಉಪಾಧ್ಯಕ್ಷ ಆಯುಬ್ ಮಂಚಿಲ ಟೇಬಲನ್ನ ಬಡಿದು ಬೆಂಬಲ ಸೂಚಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ನ ದಿನಕರ್ ಉಳ್ಳಾಲ್, ‘ವಿರೋಧ ಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷ ಕಾಂಗ್ರೆಸ್ ಹೊಂದಾಣಿಕೆಯ ರಾಜಕೀಯ ನಡೆಸುತ್ತಿವೆ. ನೀವಿಬ್ಬರು ಒಂದೇ ನಾಣ್ಯದ ಎರಡು ಮುಖಗಳು’ ಎಂದು ಆಕ್ಷೇಪಿಸಿದರು.