ಮಂಗಳೂರು: ‘ಯಕ್ಷಗಾನ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸುತ್ತಿರುವ ಹರಿನಾರಾಯಣ, ಲೀಲಾವತಿ ಬೈಪಾಡಿತ್ತಾಯ ದಂಪತಿ ಅದೆಷ್ಟೋ ಶಿಷ್ಯರನ್ನು ರೂಪಿಸಿದ್ದಾರೆ. ಅವರಿಂದ ವಿದ್ಯೆ ಕಲಿತವರು ಪ್ರಸಿದ್ಧಿ ಪಡೆಯುತ್ತಿದ್ದಾರೆ’ ಎಂದು ಕುಡುಪು ನರಸಿಂಹ ತಂತ್ರಿ ಹೇಳಿದರು.
ಡಿ.ಜಿ ಯಕ್ಷಗಾನ ಫೌಂಡೇಶನ್, ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ ಪ್ರದಾನ ಸಮಿತಿ ವತಿಯಿಂದ ಇಲ್ಲಿನ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಆಯೋಜಿಸಿದ್ದ ‘ಶ್ರೀಹರಿಲೀಲಾ’ ಯಕ್ಷನಾದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್ ಮಾತನಾಡಿ, ಯಕ್ಷಗಾನ ಚರಿತ್ರೆಯಲ್ಲಿ ಬೈಪಾಡಿತ್ತಾಯ ದಂಪತಿ ಕೊಡುಗೆ ಅಪಾರವಾದುದು. ಅವರು ಕಲಾವಿದರನ್ನು ಕುಣಿಸಿದ್ದು ಮಾತ್ರವಲ್ಲ, ಹಿಮ್ಮೇಳ ಕಲಾವಿದರನ್ನು ಸೃಷ್ಟಿಸಿದ್ದಾರೆ. ಈ ದಂಪತಿ ವೃತ್ತಿ ಕಲಾವಿದರಾಗಿ ಹಲವು ವರ್ಷಗಳಿಂದ ನಿರಂತರವಾಗಿ ರಾತ್ರಿಯಿಡೀ ನಡೆಯುವ ಆಟಗಳಲ್ಲಿ ಭಾಗವತಿಕೆ ನಡೆಸುತ್ತಾ, ಕಲಾಸೇವೆ ಮಾಡುತ್ತಿದ್ದಾರೆ’ ಎಂದರು.
ಉದ್ಯಮಿ ಹರಿಕೃಷ್ಣ ಪುನರೂರು ಮಾತನಾಡಿ, ‘ಬೈಪಾಡಿತ್ತಾಯ ದಂಪತಿಗೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿ ಗುರುತಿಸಬೇಕು’ ಎಂದು ಆಗ್ರಹಿಸಿದರು.
ಮದ್ದಳೆಗಾರ ಮಿಜಾರು ಮೋಹನ ಶೆಟ್ಟಿಗಾರ್ ಅವರಿಗೆ ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ, ಕಲಾವಿದ ಎಂ.ಎಲ್. ಸಾಮಗ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿ ಪ್ರದಾನ ಸಮಿತಿ ಕೋಶಾಧಿಕಾರಿ ಅವಿನಾಶ್ ಬೈಪಾಡಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಮ್ಮೇಳ ಕಲಾವಿದ ಚಂದ್ರಶೇಖರ್ ಭಟ್ ಕೊಂಕಣಾಜೆ ಅಭಿನಂದನಾ ಭಾಷಣ ಮಾಡಿದರು. ಆನಂದ ಗುಡಿಗಾರ್ ಪ್ರಶಸ್ತಿಪತ್ರ ವಾಚಿಸಿದರು.
ಪಂಚಮೇಳಗಳ ಯಜಮಾನ ಪಳ್ಳಿ ಕಿಶನ್ ಹೆಗ್ಡೆ, ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ ಇದ್ದರು. ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರು, ಬೈಪಾಡಿತ್ತಾಯ ಶಿಷ್ಯರು ಯಕ್ಷನಾದೋತ್ಸವ, ಅಬ್ಬರ ತಾಳ ನಾದೋತ್ಸವ, ತಾಳಮದ್ದಳೆ ಪ್ರಸ್ತುತಪಡಿಸಿದರು. ಸಾಯಿಸುಮ ನಿರೂಪಿಸಿದರು.