ಮಂಗಳೂರು: ಪರಿಪೂರ್ಣ ಕಲೆ ಎಂದೇ ಕರೆಯಲಾಗುವ ಯಕ್ಷಗಾನಕ್ಕೆ ಅದರ ಅಂತಃಸತ್ವವೇ ಶ್ರೀರಕ್ಷೆಯಾಗಿದೆ ಎಂದು ಪುತ್ತೂರಿನ ವಕೀಲ ಮಹೇಶ್ ಕಜೆ ಅಭಿಪ್ರಾಯಪಟ್ಟರು.
ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಆಯೋಜಿಸಿರುವ ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆ ‘ಯಕ್ಷೋತ್ಸವ’ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನಕ್ಕೆ ಸ್ವಯಂ ಪ್ರಭೆ ಇದೆ. ಆದ್ದರಿಂದಲೇ ವಿದ್ಯಾರ್ಥಿಗಳ ಸ್ಪರ್ಧೆಯಾಗಿರುವ ಯಕ್ಷೋತ್ಸವ ಇನ್ನು ಕೂಡ ಮುಂದುವರಿಯುತ್ತ ಬಂದಿದೆ. ಸನಾತನತ್ವ ಇರುವುದರಿಂದ ಅದು ಎಲ್ಲ ದಾಳಿಗಳನ್ನು ಮೀರಿ ನಿಂತು ಮೂಲಅಸ್ತಿತ್ವವನ್ನು ಉಳಿಸಿಕೊಂಡು ಬೆಳೆದು ಬಂದಿದೆ ಎಂದು ಅವರು ಹೇಳಿದರು.
ಎಸ್ಡಿಎಂ ಕಾನೂನು ಕಾಲೇಜಿನ ರಕ್ಷಕ–ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಭಟ್, ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ದೇವರಾಜ್ ಕೆ ಮತ್ತು ಯಕ್ಷೋತ್ಸವದ ನಿಕಟಪೂರ್ವ ಸಂಚಾಲಕ ನರೇಶ್ ಮಲ್ಲಿಗೆಮಾಡು ಮಾತನಾಡಿದರು.
ಎಸ್ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ತಾರಾನಾಥ ಅಧ್ಯಕ್ಷತೆ ವಹಿಸಿದ್ದರು. ಯಕ್ಷೋತ್ಸವದ ಸಂಚಾಲಕ ಪುಷ್ಪರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಲೇಖಾ ಸ್ವಾಗತಿಸಿದರು.
50ನೇ ವರ್ಷ ಆಚರಿಸುತ್ತಿರುವ ಯಕ್ಷೋತ್ಸವದ ಈ ಬಾರಿಯ ಸ್ಪರ್ಧೆಯಲ್ಲಿ 11 ಕಾಲೇಜುಗಳ ತಂಡಗಳು ಪಾಲ್ಗೊಂಡಿವೆ. ಇದೇ 25ರಂದು ಸ್ಪರ್ಧೆ ಮುಕ್ತಾಯಗೊಳ್ಳಿದೆ. ತೀರ್ಪುಗಾರರಾಗಿ ಜಯಪ್ರಕಾಶ್ ಶೆಟ್ಟಿ, ಉಬರಡ್ಕ ಉಮೇಶ್ ಶೆಟ್ಟಿ ಮತ್ತು ರಮೇಶ್ ಆಚಾರ್ಯ ಪಾಲ್ಗೊಂಡಿದ್ದಾರೆ.