ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆಯಲ್ಲಿ ಕಳೆದುಹೋಗಿದ್ದ ಹುಡುಗ ಕನ್ನಡದಲ್ಲಿ 124 ಅಂಕ ತೆಗೆದ

ಇಂದಿಗೂ ತಂದೆ ತಾಯಿ ಯಾರು ಎಂಬುದನ್ನರಿಯದ ಸಚಿನ್‌ಗೆ ಐಟಿಐ ಮಾಡುವಾಸೆ
Last Updated 19 ಆಗಸ್ಟ್ 2020, 5:11 IST
ಅಕ್ಷರ ಗಾತ್ರ

ದಾವಣಗೆರೆ: ಮಗುವಾಗಿರುವಾಗ ಜಾತ್ರೆಯಲ್ಲಿ ತಪ್ಪಿಸಿಕೊಂಡಿದ್ದ, ಸ್ವಲ್ಪ ದೊಡ್ಡವನಾದ ಮೇಲೆ ಸಾಕುಮನೆಯಿಂದ ತಪ್ಪಿಸಿಕೊಂಡು ಓಡಿದ್ದ, ದನ ಮೇಯಿಸಿಕೊಂಡಿದ್ದ, ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಹುಡುಗ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 125ಕ್ಕೆ 124 ಅಂಕ ಪಡೆದಿದ್ದಾನೆ.

ಇಲ್ಲಿನ ಬಾಲಕರ ಬಾಲಮಂದಿರದಲ್ಲಿ ಇರುವ ಸಚಿನ್ ಎಂಬ ಹುಡುಗನೇ ಈ ರೀತಿ ಹುಬ್ಬೇರಿಸುವಂತೆ ಮಾಡಿರುವ ಬಾಲಕ. ಈತನ ಜತೆಗೆ ಮಾತನಾಡಿದಾಗ ತಂದೆ ತಾಯಿ ಹೇಗಿದ್ದಾರೆ ಎಂಬ ನೆನಪೇ ಇಲ್ಲದ ಕಥೆಯನ್ನು ‘ಪ್ರಜಾವಾಣಿ’ ಮುಂದೆ ಬಿಚ್ಚಿಟ್ಟ. ಅವನ ಮಾತುಗಳು ಇವು.

‘ನನಗೆ ಎರಡೋ ಮೂರೋ ವರ್ಷ ಆಗಿರಬೇಕು. ಆಗ ಬೆಂಗಳೂರಿನ ಯಾವುದೋ ಜಾತ್ರೆಯಲ್ಲಿ ಕಳೆದು ಹೋಗಿದ್ದೆ. ಅಳುತ್ತಾ ನಿಂತಿದ್ದ ನನ್ನನ್ನು ಮಾರುತಿನಗರದ ಸರೋಜಮ್ಮ–ರಾಮಪ್ಪ ಎಂಬವರು ಕರೆದುಕೊಂಡು ಹೋಗಿದ್ದರು. ಅಲ್ಲಿ ಐದಾರು ವರ್ಷಗಳಿದ್ದೆ. ನಾನು ಜಾತ್ರೆಯಲ್ಲಿ ಸಿಕ್ಕಿದವ ಎಂಬುದು ಆ ಮನೆಯಲ್ಲೇ ಮುಂದೆ ನನಗೆ ಗೊತ್ತಾಗಿದ್ದು. ಅಲ್ಲಿ ಇರಲು ನನಗೆ ಇಷ್ಟವಾಗಲಿಲ್ಲ. ಅದಕ್ಕೆ ಆರೇಳು ವರ್ಷಗಳ ಹಿಂದೆ ಒಂದು ದಿನ ರೈಲು ನಿಲ್ದಾಣಕ್ಕೆ ಬಂದು ರೈಲು ಹತ್ತಿಬಿಟ್ಟೆ. ಆ ರೈಲಿನಲ್ಲಿ ಗಿರಿಜಮ್ಮ ಎಂಬ ಮಹಿಳೆ ನನ್ನಲ್ಲಿ ಮಾತನಾಡಿದರು. ನನ್ನ ಬಗ್ಗೆ ತಿಳಿದುಕೊಂಡು ಕರೆದುಕೊಂಡು ಹೋದರು. ಅದು ಹರಿಹರದಲ್ಲಿ ಅವರ ಪರಿಚಯದವರ ಮನೆ. ಅಲ್ಲಿ ನನ್ನನ್ನು ಇರಿಸಿದರು’ ಎಂದು ಸಚಿನ್‌ ನೆನಪು ಮಾಡಿಕೊಂಡ.

‘ಹರಿಹರದಲ್ಲಿ ನನ್ನನ್ನು ದನ ಕಾಯಲು ಹಚ್ಚಿದರು. ಆರು ತಿಂಗಳು ದನ ಕಾಯುವ ಕೆಲಸ ಮಾಡಿದೆ. ಈ ಕೆಲಸ ಬೇಡ ಎಂದು ಬೆಂಗಳೂರಿಗೆ ವಾಪಸ್ಸಾಗಲು ನಿರ್ಧರಿಸಿದೆ. ಹರಿಹರ ರೈಲು ನಿಲ್ದಾಣಕ್ಕೆ ಬಂದೆ. ರೈಲು ಬಂದಿರಲಿಲ್ಲ. ಅಲ್ಲೇ ಸುತ್ತಾಡುತ್ತಿದ್ದೆ. ಅಷ್ಟು ಹೊತ್ತಿಗೆ ಹರಿಹರದ ಪೊಲೀಸರು ಬಂದು ನನ್ನನ್ನು ಕರೆದುಕೊಂಡು ಹೋದರು’ ಎಂದು 6 ವರ್ಷದ ಹಿಂದಿನ ಘಟನೆಯನ್ನು ವಿವರಿಸಿದ

‘ಮೊದಲು ಚಿತ್ರದುರ್ಗದ ಬಾಲಮಂದಿರಕ್ಕೆ ಸೇರಿಸಿದರು. ಅಲ್ಲಿಯವರೆಗೆ ಶಾಲೆಯ ಮೆಟ್ಟಿಲು ಹತ್ತಿರಲಿಲ್ಲ. ನನ್ನ ವಯಸ್ಸು ನೋಡಿ ನೇರವಾಗಿ 5ನೇ ಕ್ಲಾಸ್‌ಗೆ ಸೇರಿಸಿದರು. 9ನೇ ತರಗತಿವರೆಗೆ ಅಲ್ಲಿಯೇ ಓದಿದೆ. ಬಳಿಕ ದಾವಣಗೆರೆಯ ಬಾಲಕರ ಬಾಲಮಂದಿರಕ್ಕೆ ಬಂದೆ’ ಎಂದು ತಿಳಿಸಿದ.

‘ನಮ್ಮಲ್ಲಿ 14 ವರ್ಷ ದಾಟಿದ ಮೇಲಿನ ಮಕ್ಕಳನ್ನು ಮಾತ್ರ ಇಟ್ಟುಕೊಳ್ಳಲು ಅವಕಾಶ ಇದೆ. ಹಾಗಾಗಿ ಸಚಿನ್‌ ಆರಂಭದಲ್ಲಿ ಚಿತ್ರದುರ್ಗದಲ್ಲಿದ್ದ. ಅವನ ಆಸಕ್ತಿಗೆ ಅನುಗುಣವಾಗಿ ನಾವು ಓದಿಸಲು ತಯಾರಿದ್ದೇವೆ. 21 ವರ್ಷದವರೆಗೆ ಇಟ್ಟುಕೊಳ್ಳಲು ನಮಗೆ ಅವಕಾಶವಿದೆ. ಅಷ್ಟು ಹೊತ್ತಿಗೆ ನಾಲ್ಕು ವರ್ಷದ ಕೋರ್ಸ್‌ ಮುಗಿಯದಿದ್ದರೆ, ಮುಗಿಯುವವರೆಗೆ ಇಲ್ಲಿ ಇಟ್ಟುಕೊಂಡು ಓದಿಸುತ್ತೇವೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ತಿಳಿಸಿದರು.

‘ಅವನು ರಾತ್ರಿ 12 ಗಂಟೆಯವರೆಗೂ ಓದುತ್ತಿದ್ದ. 11 ಗಂಟೆಗೆ ಮಲಗಿ ಬೆಳಿಗ್ಗೆ ಬೇಗ ಏಳಿ ಎಂದು ನಾವೇ ಹೇಳುತ್ತಿದ್ದೆವು. ಬೆಳಿಗ್ಗೆ ಬೇಗ ಎದ್ದು ಎಲ್ಲರನ್ನು ಎಬ್ಬಿಸುತ್ತಿದ್ದ. ಅಂದಿನ ಪಾಠಗಳನ್ನು ಅಂದೇ ಓದಿಕೊಳ್ಳುವುದು, ಹೋಂವರ್ಕ್‌ಗಳನ್ನು ಮರುದಿನಕ್ಕೆ ಇಡದೇ ಅಂದೇ ಮುಗಿಸುವುದು ಮಾಡಬೇಕು ಎಂದು ನಾವು ಹೇಳುತ್ತಿದ್ದೆವು. ಮಕ್ಕಳೂ ಅದನ್ನು ಅನುಸರಿಸುತ್ತಿದ್ದರು’ ಎಂದು ಬಾಲಮಂದಿರದ ಅಧೀಕ್ಷಕಿ ಜ್ಯೋತಿ ಕೆ.ಎಚ್‌. ತಿಳಿಸಿದರು.

‘ಬಕ್ಕೇಶ್ವರ ಸ್ಕೂಲ್‌ನಲ್ಲಿ ಅವನು ಮತ್ತು ಇತರ ಮಕ್ಕಳು ಓದುತ್ತಿದ್ದರು. ಇಲ್ಲಿನ ಎಲ್ಲ ಐದು ಮಕ್ಕಳು ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾಗಿದ್ದಾರೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೆಕ್ಕಿಗರಾದ ಶೃತಿ ಎಚ್‌.ಎನ್‌. ವಿವರ ನೀಡಿದರು.

ವಿಜ್ಞಾನದಲ್ಲಿ ಕಡಿಮೆ ಅಂಕ (48) ಬಂತು ಎಂದು ಬೇಸರ ವ್ಯಕ್ತಪಡಿಸುವ ಸಚಿನ್‌ ಒಟ್ಟು 419 ಅಂಕ ಪಡೆದಿದ್ದಾನೆ. ಮುಂದೆ ಐಟಿಐ ಮಾಡಬೇಕು. ಒಳ್ಳೆಯ ಉದ್ಯೋಗ ಪಡೆಯಬೇಕು ಎಂಬ ಕನಸು ಇಟ್ಟುಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT