ದಾವಣಗೆರೆ: ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯು ಭಕ್ತರಿಗೆ ಸರಳತೆಯ ಬದುಕನ್ನು ಕಲಿಸಿದ್ದಾರೆ ಎಂದು ಹೊನ್ನಾಳಿಯ ಕಲ್ಮಠದ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಎಂಸಿಸಿ ಬಿ ಬ್ಲಾಕ್ನಲ್ಲಿರುವ ಹಿರೇಮಠದಲ್ಲಿ ಸೋಮವಾರ ನಡೆದ ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮೀಜಿಯ 16ನೇ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸದ್ಯೋಜಾತ ಸ್ವಾಮೀಜಿ ವಿದ್ಯಾರ್ಥಿಗಳಿಗೆ ವಿದ್ಯಾ ಗುರುವಾಗಿ, ಭಕ್ತರಿಗೆ ಸನ್ಮಾರ್ಗದರ್ಶಿ ಗುರುವಾಗಿದ್ದರು. ಅವರು ಬದುಕನ್ನು ಬಂದ ಹಾಗೆಯೇ ಸ್ವೀಕರಿಸಿದರು. ಕೊನೆಯ ದಿನಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ವೈದ್ಯರು ಸೂಚಿಸಿದರೂ, ಅವರು ಒಪ್ಪಲಿಲ್ಲ. ಭಗವಂತನ ಇಚ್ಛೆ ಇರುವಷ್ಟು ದಿನ ಬದುಕುತ್ತೇನೆ ಎಂದಿದ್ದರು’ ಎಂದು ನೆನಪಿಸಿಕೊಂಡರು.
‘ತಂದೆ ತಾಯಿ, ಗುರು ಹಿರಿಯರನ್ನು, ಮಹಾತ್ಮರನ್ನು ನೆನೆಸಿಕೊಂಡರೆ ಆಯುಷ್ಯ, ಕೀರ್ತಿ, ಯಶಸ್ಸು, ಬಲ ದೊರೆಯುತ್ತದೆ’ ಎಂದು ಹೇಳಿದರು.
‘ಸದ್ಯೋಜಾತ ಸ್ವಾಮೀಜಿ ಕಾಯಕಜೀವಿಯಾಗಿದ್ದರು. ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುತ್ತಿದ್ದರು. ಅವರ ಸಾಮಾಜಿಕ ಕಳಕಳಿಯ ವಿಚಾರಗಳನ್ನು ಅಳವಡಿಸಿಕೊಳ್ಳಬೇಕಿದೆ’ ಎಂದು ಜವಳಿ ಉದ್ಯಮಿ ಬಿ.ಸಿ.ಉಮಾಪತಿ ಅಭಿಪ್ರಾಯಪಟ್ಟರು.
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ, ರಟ್ಟೀಹಳ್ಳಿಯ ಕಬ್ಬಿಣಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ವಿಜಯಕುಮಾರ್ ಎಚ್.ಜಿ. ಉಪನ್ಯಾಸ ನೀಡಿದರು.
ವಿಜಯ ಹಿರೇಮಠ ಹಾಗೂ ಗುರು ಪಂಚಾಕ್ಷರ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಾಸವಿ ಯುವತಿಯರ ಭಜನಾ ಮಂಡಳಿ ಸದಸ್ಯೆಯರು ಸಂಗೀತ ಸೇವೆ ನಡೆಸಿಕೊಟ್ಟರು.
ಸೃಷ್ಟಿ ವೈ.ಕೆ., ನಮ್ರತಾ, ಶಿವರಾಜ್ ಎನ್.ಎಂ. ಯೋಗ ನೃತ್ಯ ಪ್ರದರ್ಶಿಸಿದರು. ಬಾಪೂಜಿ ಬಿ ಸ್ಕೂಲ್ನ ನಿರ್ದೇಶಕ ಸ್ವಾಮಿ ತ್ರಿಬುವಾನಂದ ಸ್ವಾಗತಿಸಿ, ಅರ್ಚನಾ ಎಸ್. ನಿರೂಪಿಸಿದರು.