ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ‘ಕೆಲ ಮತದಾರರು ತಮ್ಮ ವಾಸಸ್ಥಳ ಬದಲಾಯಿಸಿದಾಗ, ಅಲ್ಲಿನ ಮತದಾರರ ಪಟ್ಟಿಯಲ್ಲೂ ಹೆಸರು ಸೇರಿಸಿಕೊಳ್ಳುತ್ತಿದ್ದಾರೆ. ಮೊದಲಿದ್ದ ಪಟ್ಟಿಯಲ್ಲಿ ಹೆಸರನ್ನು ತೆಗೆಸಿರುವುದಿಲ್ಲ. ಇದರಿಂದ ಒಬ್ಬರ ಹೆಸರು ಎರಡು–ಮೂರು ಕಡೆ ಇರುವಂತಾಗಿದೆ. ಚುನಾವಣೆ ಸಂದರ್ಭದಲ್ಲಿ ಇಂತಹ ಕಡೆ ಬೇರೆ ವ್ಯಕ್ತಿಗಳು ಅಕ್ರಮವಾಗಿ ಮತ ಚಲಾಯಿಸುವ ಸಾಧ್ಯತೆಗಳಿವೆ. ಹೀಗಾಗಿ, ಎರಡು–ಮೂರು ಕಡೆ ಇರುವ ಹೆಸರನ್ನು ಪತ್ತೆ ಮಾಡಿ, ಒಂದೇ ಕಡೆ ಹೆಸರು ಇರುವಂತೆ ನೋಡಿಕೊಳ್ಳಲು ಚುನಾವಣಾ ಆಯೋಗವು ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡಲು ಮುಂದಾಗಿದೆ. ನಾವು ಸಂಗ್ರಹಿಸಿದ ಆಧಾರ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆಧಾರ್ ಲಿಂಕ್ ಆಗಿಲ್ಲ ಎಂದು ಭಯ ಪಡಬೇಕಾಗಿಲ್ಲ. ಸದ್ಯದ ಆದೇಶದ ಪ್ರಕಾರ ಆಧಾರ್ ಲಿಂಕ್ ಆಗದಿದ್ದರೂ ಮತ ಚಲಾಯಿಸುವ ಸಂಪೂರ್ಣ ಅಧಿಕಾರ ಮತದಾರರಿಗೆ ಇರಲಿದೆ’ ಎಂದು ಸ್ಪಷ್ಟಪಡಿಸಿದರು.