ಮಲೇಬೆನ್ನೂರು: ಸಮೀಪದ ಹಿಂಡಸಗಟ್ಟೆ ಗ್ರಾಮದಲ್ಲಿ ಕಡೇ ಕಾರ್ತಿಕೋತ್ಸವದ ಪ್ರಯುಕ್ತ ಶನಿವಾರ ತಡರಾತ್ರಿ ಕೊಕ್ಕನೂರು ಆಂಜನೇಯ ಸ್ವಾಮಿ ಹಾಗೂ ಸಿದ್ದೇಶ್ವರ ಸ್ವಾಮಿ ತೆಪ್ಪೋತ್ಸವ ಅದ್ಧೂರಿಯಾಗಿ ನಡೆಯಿತು.
ಉತ್ಸವಕ್ಕೂ ಮುನ್ನ ಮಂಗಳವಾದ್ಯ, ಭಜನೆ, ಡೊಳ್ಳು ಕುಣಿತ, ತಮಟೆ ಸೇರಿದಂತೆ ಜಾನಪದ ಕಲಾತಂಡಗಳೊಂದಿಗೆ ಉತ್ಸವಮೂರ್ತಿ ಮೆರವಣಿಗೆ ನಡೆಸಲಾಯಿತು.
ಮುಖ್ಯಬೀದಿಯನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ನಂದಿಗುಡಿ ವೃಷಭಪುರಿ ಸಂಸ್ಥಾನದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಪೂಜಾ ಕಾರ್ಯ ನೆರವೇರಿಸಿದರು.
ಭಕ್ತರು ದೀಪ ಬೆಳಗಿಸಿ ಕಲ್ಯಾಣಿ ಯಲ್ಲಿ ತೇಲಿ ಬಿಟ್ಟರು. ಸುತ್ತಮುತ್ತಲ ಗ್ರಾಮಸ್ಥರು ಸೇರಿದ್ದರು.