ಕೊಟ್ಟೂರಿನಲ್ಲಿ ಹಮ್ಮಿಕೊಂಡಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಸಿರಿಗೆರೆಯ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಬೈಕ್ ರ್ಯಾಲಿಯಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಕಾಳಾಪುರ ಗ್ರಾಮದಲ್ಲಿ ವಿವಿಧ ಸಮುದಾಯಗಳ ಮಧ್ಯೆ ಗುಂಪು ಘರ್ಷಣೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಪತ್ತೆಗಾಗಿ ಜಗಳೂರು ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ತೆರಳುತ್ತಿದ್ದ ಎಸ್.ಎಸ್.ಐ ಶಬ್ಬೀರ್ ಹುಸೇನ್ ಅವರು ಬೆಳಿಗ್ಗೆ ಚಳ್ಳಕೆರೆ ರಸ್ತೆಯ ಗವಿಸ್ವಾಮಿ ಮಠದ ಹತ್ತಿರ ಬೈಕ್ನಲ್ಲಿ ಹೋಗುತ್ತಿದ್ದರು. ಜೋಗ ಜಲಪಾತಕ್ಕೆ ಹೊರಟಿದ್ದ ಬಳ್ಳಾರಿ ನಗರದ ರೋಹನ್ ಅವರು ಮುಂದಿನ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಎದುರಿಗೆ ಬರುತ್ತಿದ್ದ ಎಎಸ್ಐ ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ. ಶಬ್ಬೀರ್ ಹುಸೇನ್ ತಲೆಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೈ ಮುರಿದಿದ್ದು, ಮುಖಕ್ಕೆ ತೀವ್ರವಾಗಿ ಗಾಯಗೊಂಡ ರೋಹನ್ ಅವರನ್ನು ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.