ದಾವಣಗೆರೆ: ಇಲ್ಲಿನ ಪಿ.ಜೆ.ಬಡಾವಣೆಯ ವಿಶ್ವೇಶ್ವರಯ್ಯ ಪಾರ್ಕ್ ಬಳಿ ಮಣ್ಣು ಮುಕ್ಕ (ಎರಡು ತಲೆಯ ಹಾವು) ಮಾರಾಟ ಮಾಡಲು ಯತ್ನಿಸುತ್ತಿರುವ ವೇಳೆ ವಿದ್ಯಾರ್ಥಿ ಸೇರಿ ಐದು ಮಂದಿಯನ್ನು ಬಂಧಿಸಿರುವ ಸಿಇಎನ್ ಠಾಣೆಯ ಪೊಲೀಸರು ಮೂರು ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ.
ಚಳ್ಳಕೆರೆ ತಾಲ್ಲೂಕು ಓಬೇನಹಳ್ಳಿಯ ಗಣೇಶ್ (28), ಭದ್ರಾವತಿ ತಾಲ್ಲೂಕಿನ ಕೂಡ್ಲಿಗೆರೆ ಗ್ರಾಮದ ಐಟಿಐ ವಿದ್ಯಾರ್ಥಿ ಅಭಿಲಾಷ್ (21), ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಅಂಗುರು ಗ್ರಾಮದ ನಾಗರಾಜ (34), ಮುತ್ತಪ್ಪ (27) ಹಾಗೂ ಚನ್ನಗಿರಿ ತಾಲ್ಲೂಕಿನ ಗಾಣದಕಟ್ಟೆಯ ಪ್ರಜ್ವಲ್ (31) ಬಂಧಿತರು.
ಹಾವುಗಳನ್ನು ಚೀಲಗಳಲ್ಲಿ ತುಂಬಿಕೊಂಡು ಮಾರಾಟ ಮಾಡಲು ವಿಶ್ವೇಶ್ವರಯ್ಯ ಪಾರ್ಕ್ ಬಳಿ ನಿಂತಿದ್ದಾಗ ಮಾಹಿತಿ ಆಧರಿಸಿ ಉಪವಲಯ ಅರಣ್ಯಾಧಿಕಾರಿ ಎಚ್.ಎಸ್. ಚಂದ್ರಶೇಖರ್, ಅರಣ್ಯ ರಕ್ಷಕ ಬರ್ಕತ್ ಅಲಿ ಅವರ ಜೊತೆಗೂಡಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಎಸ್ಪಿ ಹನುಮಂತರಾಯ, ಎಎಸ್ಪಿ ಎಂ.ರಾಜೀವ್, ಡಿಸಿಆರ್ಬಿಯ ಡಿವೈಎಸ್ಪಿ ಬಸವರಾಜ್ ಬಿ.ಎಸ್.ಅವರ ಮಾರ್ಗದರ್ಶನದಲ್ಲಿ ಸಿಇಎನ್ ಅಪರಾಧ ಠಾಣೆಯ ಎಸ್ಐ ಬಿ.ವಿ.ಗಿರೀಶ್, ಸಿಬ್ಬಂದಿ ಪಿ. ನಾಗರಾಜ, ವೈ.ಬಿ.ರವಿ, ಎಸ್.ಲೋಹಿತ್, ಬಿ.ನಾಗರಾಜ, ಎಸ್.ಮಲ್ಲಿಕಾರ್ಜುನ ಹಾದಿಮನಿ, ದ್ಯಾಮೇಶ್ ದಾಳಿಯಲ್ಲಿ ಪಾಲ್ಗೊಂಡಿದ್ದರು.