ಹರಪನಹಳ್ಳಿ: ಪಟ್ಟಣದ ಮುಖ್ಯರಸ್ತೆ, ವಿವಿಧ ಬಡಾವಣೆಗಳಲ್ಲಿ ನಿಯಮ ಮೀರಿ ಸಂಚರಿಸಿದ ಬೈಕ್, ವಾಹನ ವಶಕ್ಕೆ ಪಡೆದ ಪೊಲೀಸ್ ಅಧಿಕಾರಿಗಳು ದಂಡವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಬೆಳಿಗ್ಗೆ ಡಿವೈಎಸ್ಪಿ ವಿ.ಎಸ್. ಹಾಲಮೂರ್ತಿರಾವ್ ಮತ್ತು ಪಿಎಸ್ಐ ಪ್ರಕಾಶ್ ಅವರು ಪ್ರತ್ಯೇಕವಾಗಿ ಸಂಚರಿಸಿ ಅನಗತ್ಯವಾಗಿ ಓಡಾಡುತ್ತಿದ್ದವರ ಬೈಕ್ಗಳನ್ನು ಜಪ್ತಿ ಮಾಡಿದರು.ಅಂಗಡಿಗಳನ್ನು ತೆರೆದಿದ್ದವರಿಗೆ ಎಚ್ಚರಿಕೆ ನೀಡಿದರು.
ಬೆಳಿಗ್ಗೆ 6ರಿಂದ 10ರ ವರೆಗೂ ಅಗತ್ಯ ವಸ್ತುಗಳ ಮಾರಾಟಕ್ಕೆ ಸರ್ಕಾರ ಅನುಮತಿ ಕೊಟ್ಟಿದೆ. ಆದರೆ ಬೈಕ್, ಕಾರುಗಳಲ್ಲಿ ಸಂಚಾರ ಮಾಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಈ ನಿಯಮವನ್ನು ಉಲ್ಲಂಘಿಸಿದವರಿಗೆ ದಂಢ ಹಾಕಲಾಗುವುದು. ಪುನಃ ಇವರೇ ಸಿಕ್ಕಿಬಿದ್ದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಡಿವೈಎಸ್ಪಿ ಹಾಲಮೂರ್ತಿ ರಾವ್ ತಿಳಿಸಿದರು.
ಠಾಣೆ ಮುಂಭಾಗದಿಂದ ಹಿರೆಕೆರೆ ವೃತ್ತಕ್ಕೆ ತೆರಳಿದ ಅಧಿಕಾರಿಗಳು ಅಲ್ಲಿಯೂ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಲಾಠಿ ರುಚಿ ತೋರಿಸಿದರು.
ಪ್ರವಾಸಿ ಮಂದಿರ ವೃತ್ತ, ಹೊಸಪೇಟೆ ರಸ್ತೆ, ಬಣಗಾರ ಪೇಟೆ, ಮೇಗಳಪೇಟೆ, ಕೊಟ್ಟೂರು ರಸ್ತೆ, ತೆಗ್ಗಿನಮಠ ವೃತ್ತ, ಬಸ್ ನಿಲ್ದಾಣ, ಸಿನಿಮಾ ಮಂದಿರ ರಸ್ತೆಗಳಲ್ಲಿ ಸಂಚಾರ ಮಾಡಿದ ಪಿಎಸ್ಐ ಪ್ರಕಾಶ್, ನಿಯಮ ಉಲ್ಲಂಘಿಸಿದವರಿಗೆ ದಂಡವಿಧಿಸಿದರು. ಸಿಬ್ಬಂದಿ ಇದ್ದರು.