ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಕೈಗಾರಿಕೆಗಳ ತಂದು ಉದ್ಯೋಗ ಸೃಷ್ಟಿ: ಜಿ. ಬಿ. ವಿನಯ್ ಕುಮಾರ್ ಭರವಸೆ

Published 4 ಮೇ 2024, 5:46 IST
Last Updated 4 ಮೇ 2024, 5:46 IST
ಅಕ್ಷರ ಗಾತ್ರ

ದಾವಣಗೆರೆ: ‘ಮಧ್ಯಕರ್ನಾಟಕದ ಹೆಬ್ಬಾಗಿಲು ದಾವಣಗೆರೆ ಜಿಲ್ಲೆ. ಆದರೆ ಇಲ್ಲಿ ಐಟಿ-ಬಿಟಿ, ದೊಡ್ಡ ದೊಡ್ಡ ಕೈಗಾರಿಕೆಗಳು ಇದುವರೆಗೆ ಬಂದಿಲ್ಲ. ಇದಕ್ಕೆ ಇಷ್ಟು ದೀರ್ಘಕಾಲ ಆಡಳಿತ ನಡೆಸಿರುವವರಿಗೆ ರಾಜಕೀಯ ಇಚ್ಛಾಶಕ್ತಿ, ಬದ್ಧತೆ ಕೊರತೆಯೇ ಕಾರಣ’ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಹೊನ್ನಾಳಿ - ನ್ಯಾಮತಿ ಅವಳಿ ತಾಲ್ಲೂಕಿನ ಬೆಳಲಗೆರೆ ಗ್ರಾಮದಲ್ಲಿ ಮಾತನಾಡಿದ ಅವರು, ‘ಪ್ರತಿ ಗ್ರಾಮಗಳಲ್ಲಿಯೂ ಶುದ್ಧ ನೀರಿನ ಘಟಕ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ನೀರಾವರಿ ಯೋಜನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟು ರೈತರಿಗೆ ಅನುಕೂಲ ಮಾಡಿಕೊಡುತ್ತೇನೆ’ ಎಂದು ಭರವಸೆ ನೀಡಿದರು.

‘ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದವನು ನಾನು. ರಾಜಕೀಯ ಹೊಸದು. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದಾಗ ರಾಜಕೀಯದಲ್ಲಿ ಮುಂದೇನು ಮಾಡಬೇಕೆಂಬ ಪ್ರಶ್ನೆ ಬಂತು. ಆಗ ಜನರ ಬಳಿಗೆ ಮತ್ತೆ ಹೋದೆ. ಮುಂದಿನ ನಡೆ ಬಗ್ಗೆ ಅವರಿಗೆ ಕೇಳಿದೆ. ಸ್ವಾಭಿಮಾನಿಯಾಗಿ ಎಲ್ಲರ ಮನಸ್ಸು ಗೆದ್ದಿದ್ದೀರಾ. ಚುನಾವಣೆಗೆ ಸ್ಪರ್ಧಿಸಿ. ನಾವು ಗೆಲ್ಲಿಸಿಕೊಂಡು ಬರುತ್ತೇವೆಂಬ ಭರವಸೆ ಕೊಟ್ಟ ಕಾರಣ ಸ್ಪರ್ಧೆ ಮಾಡಿದ್ದೇನೆ. ಎಲ್ಲರೂ ಬೆಂಬಲಿಸಿ ಗೆಲ್ಲಿಸುತ್ತೀರಾ ಎಂಬ ಭರವಸೆ ಇದೆ. ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಿ ಸಾಮಾನ್ಯ ಯುವಕನನ್ನು ಲೋಕಸಭೆಗೆ ಕಳುಹಿಸಿಕೊಡಿ’ ಎಂದು ಮನವಿ ಮಾಡಿದರು.

‘ನಾನು ಪಕ್ಷೇತರನಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ ಬಳಿಕ ತುಂಬ ಒತ್ತಡ ಬಂತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾವಣಗೆರೆಗೆ ಬರುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ದೊಡ್ಡ ದೊಡ್ಡ ನಾಯಕರೇ ಬರುತ್ತಿದ್ದಾರೆ. ಆದರೆ ನನಗೆ ಜನರೇ ಸ್ಟಾರ್ ಪ್ರಚಾರಕರು. ಅವರು ಮನಸ್ಸು ಮಾಡಿದರೆ ನನ್ನ ಗೆಲುವು ಕಷ್ಟವಾಗದು’ ಎಂದರು.

‘ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿ ನಾಯಕತ್ವ, ದುರಂಹಕಾರ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಅಸಮಾಧನಗೊಂಡವರ ಸಂಖ್ಯೆ ಹೆಚ್ಚಿದೆ. ಮೇಲ್ನೋಟಕ್ಕೆ ತೋರ್ಪಡಿಸದಿದ್ದರೂ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುತ್ತಾರೆ.
ಮೊದಲು ಅವರಿಗೆ ಅವಕಾಶ ಇರಲಿಲ್ಲ. ಈ ಬಾರಿ ಆಯ್ಕೆ ಇದೆ. ಹಾಗಾಗಿ, ಗೆದ್ದೇ ಗೆಲ್ಲುತ್ತೇನೆ. ದಾವಣಗೆರೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, 10 ರಿಂದ 15 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವೆ’ ಎಂದು ವಿನಯ್ ಕುಮಾರ್ ವಿಶ್ವಾಸ
ವ್ಯಕ್ತಪಡಿಸಿದರು.

ಬೆಳಲಗೆರೆ ಗ್ರಾಮದ ಮುಖಂಡರಾದ ದೊಡ್ಡಪ್ಪ, ರಾಕೇಶ, ಪ್ರಕಾಶ ಬೀರೇಶ, ಮಂಜುನಾಥ, ದೊಡ್ಡೇಶ, ಮಂಜುನಾಥ, ರವಿಕುಮಾರ್, ಮೈಲಾರಿ, ಶ್ರೀನಿವಾಸ್, ಚಂದ್ರಪ್ಪ, ಮಂಜು, ದೇವೇಂದ್ರಪ್ಪ ಮತ್ತಿತರರು ಹಾಜರಿದ್ದರು.

ವಿವಿಧ ಗ್ರಾಮಗಳಲ್ಲಿ ಬೆಂಬಲ: ಜಿ. ಬಿ. ವಿನಯ್ ಕುಮಾರ್ ಅವರು ಹೊನ್ನಾಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ಪ್ರತಿ ಗ್ರಾಮಗಳಲ್ಲಿಯೂ ನೂರಾರು ಸಂಖ್ಕೆಯಲ್ಲಿ ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು ಅದ್ಧೂರಿ ಸ್ವಾಗತ ಕೋರಿದರು.

ಈ ವೇಳೆ ಮಾಜಿ ಸೈನಿಕರಾದ ಉಮೇಶ್, ಭೋವಿ ಸಮಾಜದ ಅಧ್ಯಕ್ಷ ನಾಗರಾಜಪ್ಪ, ಮಾದನಬಾವಿ ಕರಿಬಸಪ್ಪ, ಚನ್ನೇಶ್, ದೊಡ್ಡೆತ್ತಿನಹಳ್ಳಿ ಕರಿಬಸಪ್ಪ, ತಗ್ಗಿನಹಳ್ಳಿ ನಾಗೇಶ, ಗಣೇಶ, ಹಿರೇಗೊಣಿಗೆರೆ ಗ್ರಾಮದ ಹನುಮಂತು, ಹುಲುಗೇಶ್ ಮತ್ತಿತರರು ಹಾಜರಿದ್ದರು.

ಬಳಿಕ ದಾಗಿನಕಟ್ಟೆಯಲ್ಲಿ ಮತಯಾಚನೆ ಮಾಡಿದರು. ಗ್ರಾಮದ ಸಂಗಾಹಳ್ಳಿ ಕರಿಬಸಪ್ಪ, ಯಲ್ಲೋದಹಳ್ಳಿ ಕೆ.ಎಸ್.ರಾಜಪ್ಪ, ಸಂಗಾಹಳ್ಳಿ ರಾಮಚಂದ್ರಪ್ಪ, ಪರಮೇಶ, ಸತೀಶ, ಹನುಮಂತ, ರಾಜೇಶ, ಸುರೇಶ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT